ಪದ್ಯ ೫೭: ಶಲ್ಯನನ್ನು ಎದುರಿಸಲು ಯಾರು ಮುಂದೆ ಬಂದರು?

ಮಲೆತ ಧೃಷ್ಟದ್ಯುಮ್ನನನು ಭಯ
ಗೊಳಿಸಿ ಸೋಮಕ ಸೃಂಜಯರನ
ಪ್ಪಳಿಸಿದನು ಸಾತ್ಯಕಿ ಯುಧಾಮನ್ಯೂತ್ತಮೌಂಜಸರ
ದಳದೊಳೋಡಿಸಿ ಮುರಿದು ಚಾತು
ರ್ಬಲವ ಸವರಿ ಶಿಖಂಡಿ ನಕುಲರ
ಹೊಲಬುಗೆಡಿಸಿ ಮಹೀಪತಿಯ ಪಡಿಮುಖಕೆ ಮಾರಾಂತ (ಶಲ್ಯ ಪರ್ವ, ೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ಎದುರು ನಿಂತ ಧೃಷ್ಟದ್ಯುಮ್ನನನ್ನು ಬೆದರಿಸಿ ಸಾತ್ಯಕಿ, ಸೋಮಕ, ಸೃಂಜಯರನ್ನು ಯುಧಾಮನ್ಯು, ಉತ್ತಮೌಜಸರನ್ನು ಓಡಿಸಿ, ಚತುರಂಗ ಸೈನ್ಯವನ್ನು ಸವರಿ ಶಿಖಂಡಿ ನಕುಲರನ್ನು ದಾರಿತಪ್ಪಿಸಿ ಮತ್ತೆ ಧರ್ಮಜನ ಮುಂದೆ ಬಂದು ಹೋರಾಡಲು ಸಿದ್ಧನಾದನು.

ಅರ್ಥ:
ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಭಯ: ಅಂಜಿಕೆ; ಅಪ್ಪಳಿಸು: ತಟ್ಟು, ತಾಗು; ದಳ: ಸೈನ್ಯ; ಓಡು: ಧಾವಿಸು; ಮುರಿ: ಸೀಳು; ಚಾತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಸವರು: ನಾಶಮಾಡು; ಹೊಲಬು: ರೀತಿ, ಮಾರ್ಗ; ಮಹೀಪತಿ: ರಾಜ; ಪಡಿಮುಖ: ಎದುರು, ಮುಂಭಾಗ; ಮಾರಂತು: ಯುದ್ಧಕ್ಕಾಗಿ ನಿಂತು;

ಪದವಿಂಗಡಣೆ:
ಮಲೆತ +ಧೃಷ್ಟದ್ಯುಮ್ನನನು +ಭಯ
ಗೊಳಿಸಿ +ಸೋಮಕ +ಸೃಂಜಯರನ್
ಅಪ್ಪಳಿಸಿದನು +ಸಾತ್ಯಕಿ +ಯುಧಾಮನ್ಯು+ಉತ್ತಮೌಂಜಸರ
ದಳದೊಳ್+ಓಡಿಸಿ+ ಮುರಿದು +ಚಾತು
ರ್ಬಲವ +ಸವರಿ +ಶಿಖಂಡಿ +ನಕುಲರ
ಹೊಲಬುಗೆಡಿಸಿ+ ಮಹೀಪತಿಯ+ ಪಡಿಮುಖಕೆ +ಮಾರಾಂತ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೋಮಕ ಸೃಂಜಯರನಪ್ಪಳಿಸಿದನು ಸಾತ್ಯಕಿ

ನಿಮ್ಮ ಟಿಪ್ಪಣಿ ಬರೆಯಿರಿ