ಪದ್ಯ ೧೬: ಸಂಜಯನು ನಡೆಯುವ ಮನುಷ್ಯನನ್ನು ಯಾರೊಂದಿಗೆ ಹೋಲಿಸಿದನು?

ಹೇಳುವಡೆ ಕುರುಪತಿಯನೇ ನೆರೆ
ಹೋಲುವನು ಗದೆ ಹೆಗಲಲದೆ ಮೇ
ಲಾಳ ಕಾಣೆನು ಚಮರ ಚಾಹಿಯ ಗಜಹಯಾವಳಿಯ
ಹೋಲುವುದು ಜನವೊಬ್ಬರೊಬ್ಬರ
ನಾಳೊಳೊಬ್ಬನೊ ಮೇಣು ಕುರು ಭೂ
ಪಾಲಕನೊ ನೋಡುವೆನೆನುತ ಸಂಜಯನು ನಡೆತಂದ (ಗದಾ ಪರ್ವ, ೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅವನನ್ನು ನೋಡಿದ ಸಂಜಯನು, ಅವನು ದುರ್ಯೋಧನನನ್ನೇ ಹೋಲುತ್ತಾನೆ. ಹೆಗಲಲ್ಲಿ ಗದೆಯಿದೆ. ಪರಿವಾರವೂ ಇಲ್ಲ, ಛತ್ರ ಚಾಮರ ಆನೆ ಕುದುರೆಗಳೂ ಇಲ್ಲ. ಒಬ್ಬನನ್ನು ಹೋಲುವವನು ಮತ್ತೊಬ್ಬನಿರುತ್ತಾನೆ. ಇವನೇನು ಒಬ್ಬ ಸಾಮಾನ್ಯ ಯೋಧನೋ ಅಥವ ರಾಜನಾದ ದುರ್ಯೋಧನನೋ? ನೋಡುತ್ತೇನೆ ಎಂದು ಯೋಚಿಸೆ ಅವನ ಬಳಿಗೆ ಹೆಜ್ಜೆ ಹಾಕಿದನು.

ಅರ್ಥ:
ಹೇಳು: ತಿಳಿಸು; ನೆರೆ: ಸಮೀಪ, ಹತ್ತಿರ; ಹೋಲು: ಎಣೆಯಾಗು, ಸದೃಶವಾಗು; ಗದೆ: ಮುದ್ಗರ; ಹೆಗಲು: ಬಾಹು; ಮೇಲಾಳು: ಶೂರ; ಕಾಣು: ತೋರು; ಚಮರ: ಚಾಮರ; ಚಾಹಿ: ಚಾಮರ ಬೀಸುವವ; ಗಜ: ಆನೆ; ಹಯ: ಕುದುರೆ; ಆವಳಿ: ಸಾಲು, ಗುಂಪು; ಜನ: ಮನುಷ್ಯ, ಗುಂಪು; ಆಳು: ಸೇವಕ; ಮೇಣು: ಅಥವ; ಭೂಪಾಲಕ: ರಾಜ; ನಡೆ: ಚಲಿಸು;

ಪದವಿಂಗಡಣೆ:
ಹೇಳುವಡೆ +ಕುರುಪತಿಯನೇ +ನೆರೆ
ಹೋಲುವನು +ಗದೆ +ಹೆಗಲಲದೆ+ ಮೇ
ಲಾಳ +ಕಾಣೆನು +ಚಮರ +ಚಾಹಿಯ +ಗಜ+ಹಯಾವಳಿಯ
ಹೋಲುವುದು+ ಜನವ್+ಒಬ್ಬರೊಬ್ಬರನ್
ಆಳೊಳ್+ಒಬ್ಬನೊ +ಮೇಣು+ ಕುರು+ ಭೂ
ಪಾಲಕನೊ+ ನೋಡುವೆನೆನುತ+ ಸಂಜಯನು+ ನಡೆತಂದ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ಕುರುಪತಿ, ಭೂಪಾಲಕ
(೨) ದುರ್ಯೋಧನನು ಕಂಡ ಪರಿ – ಕುರುಪತಿಯನೇ ನೆರೆ ಹೋಲುವನು ಗದೆ ಹೆಗಲಲದೆ ಮೇಲಾಳ ಕಾಣೆನು ಚಮರ ಚಾಹಿಯ ಗಜಹಯಾವಳಿಯ
(೩) ಹೋಲು – ೨, ೪ ಸಾಲಿನ ಮೊದಲ ಪದ

ಪದ್ಯ ೧೫: ಸಂಜಯನು ಯಾರ ನಡಿಗೆಯನ್ನು ನೋಡಿದನು – ೮?

ಭೂತರವ ಭೇತಾಳ ಕಲಹ ವಿ
ಧೂತ ಜಂಬುಕ ಘೂಕ ಕಾಕ
ವ್ರಾತ ರಭಸಕೆ ಬೆಚ್ಚುವನು ಪಾಂಡವರ ಬಲವೆಂದು
ಆತು ಮರಳಿದು ಹಿಂದ ನೋಡಿ ಪ
ರೇತ ವಿಭವವಲಾ ಎನುತ ಛಲ
ಚೇತನನು ಸಲೆ ಚಂಡಿಯಾದನು ಕಳನ ಚೌಕದಲಿ (ಗದಾ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂತಗಳ ಕೂಗು, ಬೇತಾಳಗಳ ಜಗಳ, ನರಿ ಗೂಬೆ ಕಾಗೆಗಳ ರಭಸಕ್ಕೆ ಪಾಂಡವರ ಸೇನೆ ಎಲ್ಲಿ ಬಂದಿತೋ ಎಂದು ಬೆಚ್ಚುತಿದ್ದನು. ಆಗಾಗ ಏನನ್ನಾದರೂ ಹಿಡಿದು ಹಿಂದಕ್ಕೆ ನೋಡುತ್ತಾ ವೈಭವವು ನಾಶವಾಯಿತಲ್ಲಾ ಎಂದು ಛಲದಿಂದ ಉಗ್ರ ಭಾವವನ್ನು ತಾಳುತ್ತಿದ್ದನು.

ಅರ್ಥ:
ಭೂತ: ದೆವ್ವ, ಪಿಶಾಚಿ; ರವ: ಶಬ್ದ; ಭೇತಾಳ: ದೆವ್ವ; ಕಲಹ: ಜಗಳ; ವಿಧೂತ: ಅಲುಗಾಡುವ; ಜಂಬುಕ: ನರಿ; ಘೂಕ: ಗೂಬೆ; ಕಾಕ: ಕಾಗೆ; ವ್ರಾತ: ಗುಂಪು; ರಭಸ: ವೇಗ; ಬೆಚ್ಚು: ಭಯ, ಹೆದರಿಕೆ; ಬಲ: ಶಕ್ತಿ, ಸೈನ್ಯ; ಆತು: ಮುಗಿದ; ಮರಳು: ಹಿಂದಿರುಗು; ಹಿಂದ: ಭೂತ, ನಡೆದ; ನೋಡು: ವೀಕ್ಷಿಸು; ಪರೇತ: ಹೆಣ, ಶವ; ವಿಭವ: ಸಿರಿ, ಸಂಪತ್ತು; ಛಲ: ದೃಢ ನಿಶ್ಚಯ; ಚೇತನ: ಮನಸ್ಸು, ಬುದ್ಧಿ; ಸಲೆ: ಒಂದೇ ಸಮನೆ, ಏಕಪ್ರಕಾರವಾಗಿ; ಚಂಡಿ: ಹಟಮಾರಿತನ, ಛಲ; ಕಳ: ರಣರಂಗ; ಚೌಕ: ಬಯಲು, ಕಣ, ರಂಗ;

ಪದವಿಂಗಡಣೆ:
ಭೂತ+ರವ +ಭೇತಾಳ +ಕಲಹ +ವಿ
ಧೂತ +ಜಂಬುಕ +ಘೂಕ +ಕಾಕ
ವ್ರಾತ +ರಭಸಕೆ +ಬೆಚ್ಚುವನು +ಪಾಂಡವರ +ಬಲವೆಂದು
ಆತು +ಮರಳಿದು+ ಹಿಂದ + ನೋಡಿ+ ಪ
ರೇತ +ವಿಭವವಲಾ +ಎನುತ +ಛಲ
ಚೇತನನು +ಸಲೆ +ಚಂಡಿಯಾದನು +ಕಳನ +ಚೌಕದಲಿ

ಅಚ್ಚರಿ:
(೧) ದುರ್ಯೋಧನನು ಹೆದರುವ ಪರಿ – ಭೂತರವ ಭೇತಾಳ ಕಲಹ ವಿಧೂತ ಜಂಬುಕ ಘೂಕ ಕಾಕ
ವ್ರಾತ ರಭಸಕೆ ಬೆಚ್ಚುವನು
(೨) ದುರ್ಯೋಧನನನ್ನು ಕರೆದ ಪರಿ – ಛಲಚೇತನನು ಸಲೆ ಚಂಡಿಯಾದನು

ಪದ್ಯ ೧೪: ಸಂಜಯನು ಯಾರ ನಡಿಗೆಯನ್ನು ನೋಡಿದನು – ೭?

ಕಡಿದ ಕೈದುಗಳೊಟ್ಟಿಲಲಿ ತನಿ
ಗೆಡೆದ ಗಾಲಿಯ ಹಾಯ್ಕಿ ಮೆಲ್ಲಡಿ
ಯಿಡುತ ಹಜ್ಜೆಯ ನೆಣದ ಕೆಸರಿಗೆ ಛತ್ರಚಮರಿಗಳ
ಅಡಸಿ ಹಜ್ಜೆಯನಿಡುತ ರಕುತದ
ಮಡುವನೆಡಬಲಕಿಕ್ಕಿ ಮೆಲ್ಲನೆ
ನಡೆದು ದೈವವ ಬಯ್ದು ಬಯ್ದಡಿಗಡಿಗೆ ಸುಯ್ವವನ (ಗದಾ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಮುರಿದು ಬಿದ್ದ ಆಯುಧಗಳ ರಾಶಿಯಲ್ಲಿ ಗಾಲಿಯನ್ನು ಹಾಕಿ ಅದರ ಮೇಲೆ ಕಾಲಿಡುತ್ತಾ, ಎರಡು ಹೆಜ್ಜೆ ದೂರದಲ್ಲಿ ಕೆಸರಿರಲು ಅಲ್ಲಿ ಛತ್ರ ಚಾಮರಗಳನ್ನು ಹಾಕಿ ಕಾಲಿಡುತ್ತಾ, ರಕ್ತದ ಮಡುಗಳನ್ನು ಎಡಕ್ಕೆ ಬಲಕ್ಕೆ ಬಿಟ್ಟು ಮೆಲ್ಲನೆ ನಡೆಯುತ್ತಾ, ಹೆಜ್ಜೆ ಹೆಜ್ಜೆಗೂ ದೈವ ವಿಧಿಯನ್ನು ಬಯ್ಯುತ್ತಾ ನಿಟ್ಟುಸಿರು ಬಿಡುವವನನ್ನು ಸಂಜಯನು ನೋಡಿದನು.

ಅರ್ಥ:
ಕಡಿ: ಸೀಳು; ಕೈದು: ಆಯುಧ; ತನಿ: ಹೆಚ್ಚಾಗು, ಅತಿಶಯವಾಗು; ಕೆಡೆ: ಬೀಳು, ಕುಸಿ; ಗಾಲಿ: ಚಕ್ರ; ಹಾಯ್ಕು: ಹೊಡೆ; ಮೆಲ್ಲಡಿ: ಮೃದುವಾದ ಪಾದ, ಕೋಮಲವಾದ ಅಡಿ; ಹಜ್ಜೆ: ಪಾದ; ನೆಣ: ಕೊಬ್ಬು, ಮೇದಸ್ಸು; ಕೆಸರು: ರಾಡಿ, ಪಂಕ; ಛತ್ರ: ಕೊಡೆ; ಚಮರಿ: ಚಾಮರ; ಅಡಸು: ಬಿಗಿಯಾಗಿ ಒತ್ತು; ರಕುತ: ನೆತ್ತರು; ಮಡು: ಕೊಳ, ಸರೋವರ; ಎಡಬಲ: ಅಕ್ಕಪಕ್ಕ; ಮೆಲ್ಲನೆ: ನಿಧಾನ; ದೈವ: ಭಗವಂತ; ಬಯ್ದು: ಜರೆ; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ಸುಯ್: ನಿಟ್ಟುಸಿರು;

ಪದವಿಂಗಡಣೆ:
ಕಡಿದ +ಕೈದುಗಳ್+ಒಟ್ಟಿಲಲಿ +ತನಿ
ಕೆಡೆದ +ಗಾಲಿಯ +ಹಾಯ್ಕಿ +ಮೆಲ್ಲಡಿ
ಯಿಡುತ +ಹಜ್ಜೆಯ +ನೆಣದ +ಕೆಸರಿಗೆ+ ಛತ್ರ+ಚಮರಿಗಳ
ಅಡಸಿ +ಹಜ್ಜೆಯನಿಡುತ +ರಕುತದ
ಮಡುವನ್+ಎಡಬಲಕಿಕ್ಕಿ +ಮೆಲ್ಲನೆ
ನಡೆದು +ದೈವವ +ಬಯ್ದು +ಬಯ್ದ್+ಅಡಿಗಡಿಗೆ+ ಸುಯ್ವವನ

ಅಚ್ಚರಿ:
(೧) ಎಡಬಲ, ಅಡಿಗಡಿ, ಅಡಿಯಿಡು – ಪದಗಳ ಬಳಕೆ

ಪದ್ಯ ೧೩: ಸಂಜಯನು ಯಾರ ನಡಿಗೆಯನ್ನು ನೋಡಿದನು – ೬?

ಕಡಿವಡೆದ ಹಕ್ಕರಿಕೆ ರೆಂಚೆಯ
ತಡಿಗಳಲಿ ಕುಳ್ಳಿರ್ದು ಮೊಣಕಾ
ಲ್ಗಡಿಯ ಗಾಢವ್ರಣದ ನೆಣವಸೆಗೆಸರ ಬಳಿಬಳಿದು
ಗಡಣಹೆಣದೆರಹುಗಳೊಳಗೆ ಕಾ
ಲಿಡುತ ಸೋದಿಸಿ ಮುಂದೆ ಹೆಜ್ಜೆಯ
ನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ (ಗದಾ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಮುರಿದ ತಡಿ ರಂಚೆಗಳಲ್ಲಿ ಕುಳಿತು ಮೊಣಕಾಲಿನಲ್ಲಾದ ಗಾಯಕ್ಕೆ ನೆಣದ ಕೆಸರನ್ನು ಬಳಿದು, ಒಟ್ಟಾಗಿ ಬಿದ್ದಿದ್ದ ಹೆಣಗಳ ನಡುವೆ ಜಾಗವನ್ನು ಹುಡುಕಿ ಕಾಲಿಟ್ಟು, ಮುಂದೆ ಹೆಜ್ಜೆಯನ್ನಿಡುವಾಗ ಓಲಾಡಿ ಮಾರ್ಗಶ್ರಮಕ್ಕೆ ಹೆದರುವವನೊಬ್ಬನನ್ನು ಸಂಜಯನು ನೋಡಿದನು.

ಅರ್ಥ:
ಕಡಿ: ಸೀಳು; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ತಡಿ: ಕುದುರೆಯ ಜೀನು; ಕುಳ್ಳಿರ್ದು: ಆಸೀನನಾಗು; ಗಾಢ: ಹೆಚ್ಚಳ, ಅತಿಶಯ; ವ್ರಣ: ಹುಣ್ಣು; ನೆಣ: ಕೊಬ್ಬು, ಮೇದಸ್ಸು; ಕೆಸರು: ರಾಡಿ, ಪಂಕ; ಬಳಿ: ಸವರು; ಗಡಣ: ಗುಂಪು; ಹೆಣ: ಜೀವವಿಲ್ಲದ ಶರೀರ; ಸೋದಿಸು: ಶುದ್ಧಿ ಮಾಡು; ಮುಂದೆ: ಎದುರು; ಹೆಜ್ಜೆ: ಪಾದ; ಪೈಸರ: ಕುಗ್ಗುವುದು; ಮಾರ್ಗ: ದಾರಿ; ಶರ್ಮ: ಆಯಾಸ; ಬೆಮರು: ಹೆದರು;

ಪದವಿಂಗಡಣೆ:
ಕಡಿವಡೆದ +ಹಕ್ಕರಿಕೆ +ರೆಂಚೆಯ
ತಡಿಗಳಲಿ +ಕುಳ್ಳಿರ್ದು +ಮೊಣಕಾ
ಲ್ಗಡಿಯ +ಗಾಢವ್ರಣದ+ ನೆಣವಸೆ+ಕೆಸರ +ಬಳಿಬಳಿದು
ಗಡಣ+ಹೆಣದ್+ಎರಹುಗಳೊಳಗೆ +ಕಾ
ಲಿಡುತ +ಸೋದಿಸಿ +ಮುಂದೆ +ಹೆಜ್ಜೆಯ
ನಿಡುತ +ಪೈಸರವೋಗಿ+ ಮಾರ್ಗಶ್ರಮಕೆ +ಬೆಮರುವನ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಹೆಜ್ಜೆಯನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ

ಪದ್ಯ ೧೨: ಸಂಜಯನು ಯಾರ ನಡಿಗೆಯನ್ನು ನೋಡಿದನು – ೫?

ಕುಣಿವ ಕರಿಗಳ ತಲೆಯ ಮಡುಹಿನ
ಲಣೆದು ಹೆಜ್ಜೆಯನಿಡುತ ಭೂತದ
ಹೆಣನ ತೀನಿಗೆ ತವಕಿಸುವ ವೇತಾಳ ಸಂತತಿಯ
ರಣದೊಳಂಜಿಸಿ ಸೆರೆನರದ ಕಾ
ವಣದೊಳಗೆ ಕೈಯೂರಿ ಮಿಗೆ ಹಳ
ವೆಣನ ಹೊಲಸಿಗೆ ಹೇಸಿ ಹರಿದಡಿಗಡಿಗೆ ಸುಯ್ವವನ (ಗದಾ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಆಗ ತಾನೇ ಸತ್ತು ಕುಣೀಯುವ ಆನೆಗಳನ್ನು ತಿವಿದು ಹೆಜ್ಜೆಯನ್ನಿಡುತ್ತಾ, ಹೆಣವನ್ನು ತಿನ್ನಲು ಆತುರದಿಂದ ನುಗ್ಗುವ ಬೇತಾಳಗಳನ್ನು ಹೆದರಿಸಿ, ಕತ್ತಿನ ನರಗಳ ಹನೀಗೆಯಲ್ಲಿ ಕೈಯೂರಿ, ಹಳೆಯದಾದ ಹೆಣಗಳ ಹೊಲಸಿಗೆ ಅಸಹ್ಯಪಟ್ಟುಕೊಂಡು ಜೋರಾಗಿ ಹೋಗುತ್ತಾ ಹೆಜ್ಜೆಹೆಜ್ಜೆಗೂ ಅವನು ನಿಟ್ಟುಸಿರು ಬಿಡುತ್ತಿದ್ದನು.

ಅರ್ಥ:
ಕುಣಿ: ನರ್ತಿಸು; ಕರಿ: ಆನೆ; ತಲೆ: ಶಿರ; ಮಡುಹು:ಹಳ್ಳ, ಕೊಳ್ಳ; ಅಣೆ:ತಿವಿ, ಹೊಡೆ; ಹೆಜ್ಜೆ: ಪಾದ; ಭೂತ: ಬೇತಾಳ; ಹೆಣ: ಜೀವವಿಲ್ಲದ ಶರೀರ; ತೀನಿ: ಆಹಾರ, ತಿನಿಸು; ತವಕಿಸು: ಆತುರಿಸು; ವೇತಾಳ: ಭೂತ; ಸಂತತಿ: ವಂಶ; ರಣ: ಯುದ್ಧ; ಅಂಜಿಸು: ಹೆದರಿಸು; ಸೆರೆ: ಬಂಧನ; ಕಾವಣ: ಹಂದರ, ಚಪ್ಪರ; ಕೈಯೂರು: ಕೈಯಿಟ್ಟು; ಮಿಗೆ: ಅಧಿಕ; ಹಳವೆಣ: ಹಳೆಯದಾದ ಹೆಣ; ಹೊಲಸು: ಕೊಳಕು, ಅಶುದ್ಧ; ಹೇಸು: ಅಸಹ್ಯಪಡು; ಹರಿ: ಚಲಿಸು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ಸುಯ್ವ: ನಿಟ್ಟುಸಿರು;

ಪದವಿಂಗಡಣೆ:
ಕುಣಿವ +ಕರಿಗಳ+ ತಲೆಯ +ಮಡುಹಿನಲ್
ಅಣೆದು +ಹೆಜ್ಜೆಯನಿಡುತ +ಭೂತದ
ಹೆಣನ +ತೀನಿಗೆ +ತವಕಿಸುವ +ವೇತಾಳ +ಸಂತತಿಯ
ರಣದೊಳ್+ಅಂಜಿಸಿ +ಸೆರೆನರದ+ ಕಾ
ವಣದೊಳಗೆ +ಕೈಯೂರಿ +ಮಿಗೆ+ ಹಳ
ವೆಣನ+ ಹೊಲಸಿಗೆ +ಹೇಸಿ +ಹರಿದ್+ಅಡಿಗಡಿಗೆ+ ಸುಯ್ವವನ

ಅಚ್ಚರಿ:
(೧) ಹ ಕಾರದ ಸಾಲು ಪದ – ಹಳವೆಣನ ಹೊಲಸಿಗೆ ಹೇಸಿ ಹರಿದಡಿಗಡಿಗೆ

ಪದ್ಯ ೧೧: ಸಂಜಯನು ಯಾರ ನಡಿಗೆಯನ್ನು ನೋಡಿದನು – ೪?

ಕಂದ ಪಖ್ಖಲೆಗಳಲಿ ತೀವಿದ
ಮಂದ ರಕುತದ ತೋದ ತಲೆಗಳ
ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ
ಸಂದಣಿಸಿ ಹರಿದೇರ ಬಾಯ್ಗಳೊ
ಳೊಂದಿ ಬಾಯ್ಗಳನಿಡುವ ಪೂತನಿ
ವೃಂದವನು ಕಂಡೋಸರಿಸುವನದೊಂದು ದೆಸೆಗಾಗಿ (ಗದಾ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಟ್ಟಿರಕ್ತದಿಂದ ತೋಯಿದ್ದ ಪಾತ್ರೆಯಂತಿದ್ದ ತಲೆಗಳನ್ನು ತಿಂದು ಎಸೆಯುವ ಕೊಬ್ಬನ್ನು ತಿಂದು ಕಾರುವ, ಸತ್ತ ಆನೆಗಳನ್ನು ತಿಂದು ತೆಳ್ಳಗೆ ಮಾಡುವ, ಹೆಣಗಳ ಗಾಯದಲ್ಲಿ ಬಾಯಿಟ್ಟು ಹೀರುವ ಪೂತನಿಗಳನ್ನು ಕಂಡು ಅವನು ಪಕ್ಕಕ್ಕೆ ಸರಿದು ಹೋಗುತ್ತಿದ್ದನು.

ಅರ್ಥ:
ಪಖ್ಖಲೆ: ನೀರಿನ ಚೀಲ, ಕೊಪ್ಪರಿಗೆ; ತೀವು: ತುಂಬು, ಭರ್ತಿಮಾಡು; ಮಂದ: ನಿಧಾನ ಗತಿಯುಳ್ಳದು; ರಕುತ: ನೆತ್ತರು; ತೋದ: ನೆನೆ, ಒದ್ದೆಯಾಗು; ತಲೆ: ಶಿರ; ತಿಂದು: ತಿನ್ನು; ಬಿಸುಡು: ಹೊರಹಾಕು; ನೆಣ: ಕೊಬ್ಬು, ಮೇದಸ್ಸು; ಪೂತನಿ: ರಾಕ್ಷಸಿ; ವೃಂದ: ಗುಂಪು; ಕಂಡು: ನೋಡು; ಓಸರಿಸು: ಓರೆಮಾಡು, ಹಿಂಜರಿ; ದೆಸೆ: ದಿಕ್ಕು; ಬಸೆ: ಕೊಬ್ಬು, ನೆಣ; ಬಾಡಿಸು: ಕಳೆಗುಂದಿಸು; ಸಂದಣಿ: ಗುಂಪು;

ಪದವಿಂಗಡಣೆ:
ಕಂದ +ಪಖ್ಖಲೆಗಳಲಿ +ತೀವಿದ
ಮಂದ +ರಕುತದ+ ತೋದ +ತಲೆಗಳ
ತಿಂದು +ಬಿಸುಡುವ +ನೆಣನ +ಕಾರುವ +ಬಸೆಯ +ಬಾಡಿಸುವ
ಸಂದಣಿಸಿ +ಹರಿದೇರ+ ಬಾಯ್ಗಳೊಳ್
ಒಂದಿ +ಬಾಯ್ಗಳನಿಡುವ +ಪೂತನಿ
ವೃಂದವನು +ಕಂಡ್+ಓಸರಿಸುವನ್+ಅದೊಂದು +ದೆಸೆಗಾಗಿ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತೋದ ತಲೆಗಳ ತಿಂದು
(೨) ಸಂದಣಿಸು, ವೃಂದ – ಸಮಾನಾರ್ಥಕ ಪದ

ಪದ್ಯ ೧೦: ಸಂಜಯನು ಯಾರ ನಡಿಗೆಯನ್ನು ನೋಡಿದನು – ೩?

ಓಡದಿಹ ನರಿ ಹದ್ದು ಕಾಗೆಗೆ
ಕೂಡೆ ಗದೆಯನು ಬೀಸುವನು ಬಿಡೆ
ನೋಡುವನು ಹೆಣದಿನಿಹಿಗಳ ಹೇರಾಳ ರಕ್ಕಸರ
ತೋಡುಗೈಗಳ ಮಿದುಳ ಬಾಯ್ಗಳ
ಬಾಡುಗರುಳಿನ ಚೀತ್ಕೃತಿಯ ತಲೆ
ಯೋಡುಗಳ ತನಿರಕುತಪಾನದ ಶಾಕಿನೀಜನವ (ಗದಾ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಓಡಿ ಹೋಗದಿರುವ ಹದ್ದು, ಕಾಗೆ, ನರಿಗಳಿಗೆ ಅವನು ಗದೆಯನ್ನು ಬೀಸಿ ಓಡಿಸುತ್ತಿದ್ದನು. ಹೆಣಗಳನ್ನು ತಿನ್ನುವ ರಾಕ್ಷಸರನ್ನು ನೋಡುತ್ತಿದ್ದನು. ಅಲ್ಲಿ ಶಾಕಿನಿಯರು ಕೈಗಳಿಂದ ತೋಡಿ ಮಿದುಳುಗಳನ್ನು ಬಾಯಲ್ಲಿಟ್ಟುಕೊಳ್ಳುತ್ತಿದ್ದರು. ಕರುಳುಗಳನ್ನು ತಿಂದು ಚೀತ್ಕರಿಸುತ್ತಿದ್ದರು. ತಲೆ ಬುರುಡೆಗಳಲ್ಲಿ ರಕ್ತಪಾನವನ್ನು ಮಾಡುತ್ತಿದ್ದರು.

ಅರ್ಥ:
ಓಡು: ಧಾವಿಸು; ಹದ್ದು: ಗರುಡ ಜಾತಿಗೆ ಸೇರಿದ ಹಕ್ಕಿ; ಕಾಗೆ: ಕಾಕ; ಕೂಡೆ: ಜೊತೆ; ಗದೆ: ಮುದ್ಗರ; ಬೀಸು: ಒಗೆ, ಎಸೆ; ಬಿಡೆ: ತೊರೆದು; ನೋಡು: ವೀಕ್ಷಿಸು; ಹೆಣ: ಜೀವವಿಲ್ಲದ ಶರೀರ; ತಿನಿಹಿ: ತಿನ್ನುವ; ಹೇರಾಳ: ಬಹಳ; ರಕ್ಕಸ: ರಾಕ್ಷಸ; ತೋಡು: ಹಳ್ಳ; ಕೈ: ಹಸ್ತ; ಮಿದುಳ: ಮಸ್ತಿಷ್ಕ; ಬಾಡು: ಕಳೆಗುಂದು; ಕರುಳು: ಪಚನಾಂಗ; ಚೀತ್ಕೃತಿ: ಕೂಗು, ಗರ್ಜಿಸು; ತಲೆ: ಶಿರ; ತನಿ: ಹೆಚ್ಚಾಗು; ರಕುತ: ನೆತ್ತರು; ಪಾನ: ಕುಡಿ; ಶಾಕಿನಿ: ರಾಕ್ಷಸಿ; ಜನ: ಗುಂಪು;

ಪದವಿಂಗಡಣೆ:
ಓಡದಿಹ +ನರಿ +ಹದ್ದು +ಕಾಗೆಗೆ
ಕೂಡೆ +ಗದೆಯನು +ಬೀಸುವನು +ಬಿಡೆ
ನೋಡುವನು +ಹೆಣ+ತಿನಿಹಿಗಳ +ಹೇರಾಳ +ರಕ್ಕಸರ
ತೋಡು+ಕೈಗಳ +ಮಿದುಳ +ಬಾಯ್ಗಳ
ಬಾಡು+ಕರುಳಿನ +ಚೀತ್ಕೃತಿಯ +ತಲೆ
ಯೋಡುಗಳ+ ತನಿ+ರಕುತ+ಪಾನದ +ಶಾಕಿನೀಜನವ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಓಡದಿಹ ನರಿ ಹದ್ದು ಕಾಗೆಗೆಕೂಡೆ ಗದೆಯನು ಬೀಸುವನು

ಪದ್ಯ ೯: ಸಂಜಯನು ಯಾರ ನಡಿಗೆಯನ್ನು ನೋಡಿದನು – ೨?

ಎಡಹುದಲೆಗಳ ದಾಂಟಿ ರಕುತದ
ಮಡುವಿನಲಿ ಗದೆಯೂರಿ ನೆಲೆಗಳ
ಪಡೆದು ಕಂಪಿಸಿ ಕುಣಿವ ಮುಂಡವ ಗದೆಯಲಪ್ಪಳಿಸಿ
ಅಡಿಗಡಿಗೆ ಹೇರಾನೆಗಳ ಹೇ
ರೊಡಲ ಹತ್ತಿಳಿದೇರಿ ಝೊಂಪಿಸಿ
ಮಿಡುಕಿ ನಿಲುವನು ಬಳಲಿದೂರ್ಧ್ವಶ್ವಾಸ ಲಹರಿಯಲಿ (ಗದಾ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಎಡವಿ ಬೀಳುವಂತಹ ಜಾಗಗಳನ್ನು ದಾಟಿ, ರಕ್ತದ ಮಡುವುಗಳಲ್ಲಿ ಗದೆಯನ್ನೂರಿ ಕಾಲಿಡಲು ಜಾಗವನ್ನು ಹುಡುಕಿಕೊಂಡು ನಡುಗುತ್ತಾ ಕುಣೀಯುವ ಮೂಂಡಗಳನ್ನು ಗದೆಯಿಂದ ಅಪ್ಪಳಿಸಿ ದೊಡ್ಡ ಆನೆಗಳ ದೇಹವನ್ನು ಹತ್ತಿಳಿದು ಹೊಯ್ದಾಡಿ ಬಳಲಿ ಮೇಲುಸಿರು ಹತ್ತಿ ನಡುಗುತ್ತಾ ನಿಲ್ಲುತ್ತಿದ್ದನು.

ಅರ್ಥ:
ಎಡಹು: ಬೀಳು; ತಲೆ: ಶಿರ; ದಾಂಟಿ: ದಾಟು; ರಕುತ: ನೆತ್ತರು; ಮಡು: ಹಳ್ಳ, ಕೊಳ್ಳ; ಗದೆ: ಮುದ್ಗರ; ಊರು: ನೆಲೆಸು; ನೆಲೆ: ಭೂಮಿ, ಜಾಗ; ಪಡೆದು: ದೊರಕಿಸು; ಕಂಪಿಸು: ನಡುಗು; ಕುಣಿ: ನರ್ತಿಸು; ಮುಂಡ: ಶಿರವಿಲ್ಲದ ದೇಹ; ಅಪ್ಪಳಿಸು: ತಟ್ಟು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ಹೇರಾನೆ: ದೊಡ್ಡ ಗಜ; ಹೇರೊಡಲು: ದೊಡ್ಡದಾದ ಶರೀರ; ಹತ್ತಿಳಿ: ಮೇಲೇರಿ ಕೆಳಗಿಳಿ; ಝೊಂಪಿಸು: ಭಯಗೊಳ್ಳು; ಮಿಡುಕು: ನಡುಕ, ಕಂಪನ; ಬಳಲು: ಆಯಾಸಗೊಳ್ಳು; ಉರ್ಧ್ವಶ್ವಾಸ: ಏದುಸಿರು, ಮೇಲುಸಿರು; ಲಹರಿ: ರಭಸ, ಆವೇಗ;

ಪದವಿಂಗಡಣೆ:
ಎಡಹು+ತಲೆಗಳ +ದಾಂಟಿ +ರಕುತದ
ಮಡುವಿನಲಿ +ಗದೆಯೂರಿ +ನೆಲೆಗಳ
ಪಡೆದು +ಕಂಪಿಸಿ +ಕುಣಿವ +ಮುಂಡವ+ ಗದೆಯಲ್+ಅಪ್ಪಳಿಸಿ
ಅಡಿಗಡಿಗೆ +ಹೇರಾನೆಗಳ +ಹೇ
ರೊಡಲ +ಹತ್ತಿಳಿದ್+ಏರಿ+ ಝೊಂಪಿಸಿ
ಮಿಡುಕಿ +ನಿಲುವನು +ಬಳಲಿದ್+ಊರ್ಧ್ವಶ್ವಾಸ+ ಲಹರಿಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೇರಾನೆಗಳ ಹೇರೊಡಲ ಹತ್ತಿಳಿದೇರಿ
(೨) ನಿಲ್ಲಲು ಜಾಗವನ್ನು ವಿವರಿಸುವ ಪರಿ – ರಕುತದ ಮಡುವಿನಲಿ ಗದೆಯೂರಿ ನೆಲೆಗಳ ಪಡೆದು

ಪದ್ಯ ೮: ಸಂಜಯನು ಯಾರ ನಡಿಗೆಯನ್ನು ನೋಡಿದನು – ೧?

ಅರಸ ಕೇಳೈ ಸಂಜಯನು ಬರ
ಬರಲು ಕಂಡನು ದೂರದಲಿ ನಿರಿ
ಗರುಳ ಕಾಲ್ದೊಡಕುಗಳ ಖಂಡದ ಜಿಗಿಯ ಚಾರುಗಳ
ಕರಿಗಳೊಟ್ಟಿಲನೇರಿಳಿದು ಪೈ
ಸರಿಸಿ ಮಿದುಳಿನ ಚೋರು ಜೊಂಡಿನ
ತೊರಳೆಯಲಿ ದಡದಡಿಸಿ ಜಾರುತ ಬೀಳುತೇಳುವನ (ಗದಾ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ಬರ ಬರುತ್ತಾ ದೂರದಲ್ಲಿ ಕರುಳುಗಳು ಕಾಲಿಗೆ ತೊಡಕುತ್ತಾ ಇರಲು, ಮಾಂಸಖಂಡಗಳ ಅಂಟಿನಲ್ಲಿ ಜಾರುತ್ತಾ, ಆನೆಗಳ ರಾಶಿಗಳನ್ನು ಹತ್ತಿಳಿದು ಕೆಳಕ್ಕೆ ಬೀಳುತ್ತಾ ಮಿದುಳಿನ ಜೊಂಡು ಗುಲ್ಮಗಳನ್ನು ತುಳಿದು ವೇಗವಾಗಿ ಜಾರುತ್ತಾ, ಬೀಳುತ್ತಾ, ಏರುತ್ತಾ ಇದ್ದವನೊಬ್ಬನನ್ನು ನೋಡಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬರಲು: ಆಗಮಿಸು; ಕಂಡು: ನೋಡು; ದೂರ: ಬಹಳ ಅಂತರ; ನಿರಿ: ನೆರಿಗೆಯಂತಿರುವ ಕರುಳು; ಕಾಲು: ಪಾದ; ತೊಡಕು: ಸಿಕ್ಕಿಕೊಳ್ಳು; ಖಂಡ: ಚೂರು; ಜಿಗಿ: ಅಂಟು; ಜಾರು: ಬೀಳು; ಕರಿ: ಆನೆ; ಒಟ್ಟು: ಗುಂಪು; ಏರು: ಮೇಲೆ ಹತ್ತು; ಇಳಿ: ಕೆಳಕ್ಕೆ ಬಂದು; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಮಿದುಳು: ಮಸ್ತಿಷ್ಕ; ಜೋರು: ಹೆಚ್ಚಳ; ಜೊಂಡು: ತಲೆಯ ಹೊಟ್ಟು; ತೊರಳೆ: ಗುಲ್ಮ, ಪ್ಲೀಹ; ದಡದಡಿಸು: ವೇಗವಾಗಿ ನಡೆ; ಜಾರು: ಬೀಳು;

ಪದವಿಂಗಡಣೆ:
ಅರಸ +ಕೇಳೈ +ಸಂಜಯನು +ಬರ
ಬರಲು +ಕಂಡನು +ದೂರದಲಿ+ ನಿರಿ
ಗರುಳ +ಕಾಲ್ದೊಡಕುಗಳ+ ಖಂಡದ+ ಜಿಗಿಯ+ ಚಾರುಗಳ
ಕರಿಗಳ್+ಒಟ್ಟಿಲನ್+ಏರಿಳಿದು +ಪೈ
ಸರಿಸಿ +ಮಿದುಳಿನ +ಚೋರು +ಜೊಂಡಿನ
ತೊರಳೆಯಲಿ +ದಡದಡಿಸಿ+ ಜಾರುತ +ಬೀಳುತೇಳುವನ

ಅಚ್ಚರಿ:
(೧) ಚೋರು ಜೊಂಡಿನ, ಜಿಗಿಯ ಚಾರುಗಳ – ಪದಗಳ ಬಳಕೆ
(೨) ಬರಬರಲು, ದಡದಡಿಸಿ – ಪದಗಳ ಬಳಕೆ

ಪದ್ಯ ೭: ಸಾತ್ಯಕಿಯು ವ್ಯಾಸರಿಗೆ ಏನು ಹೇಳಿದ?

ದೇವ ನಿಮ್ಮಯ ಶಿಷ್ಯನೇ ಪರಿ
ಭಾವಿಸೆನು ತಾನರಿದೆನಾದಡೆ
ದೇವಕೀಸುತನಾಣೆ ಬಿಟ್ಟೆನು ಸಂಜಯನ ವಧೆಯ
ನೀವು ಬಿಜಯಂಗೈವುದೆನೆ ಬದ
ರಾವಳಿಮಂದಿರಕೆ ತಿರುಗಿದ
ನಾ ವಿಗಡಮುನಿ ಖೇದಕಲುಷಿತ ಸಂಜಯನ ತಿಳುಹಿ (ಗದಾ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ಸಾತ್ಯಕಿಯು ವ್ಯಾಸರನ್ನು ಕಂಡು, ದೇವ, ಸಂಜಯನು ನಿಮ್ಮ ಶಿಷ್ಯನೆಂಬುದನ್ನು ಶ್ರೀಕೃಷ್ಣನಾಣೆಗೂ ನಾನರಿಯೆ, ಸಂಜಯನ ವಧೆಯನ್ನು ಕೈಬಿಟ್ಟಿದ್ದೇನೆ, ನೀವು ದಯಮಾಡಿಸಿರಿ ಎನ್ನಲು, ವೇದವ್ಯಾಸರು ದುಃಖಿತನಾಗಿದ್ದ ಸಂಜಯನನ್ನು ಸಂತೈಸಿ ಬದರಿಕಾಶ್ರಮಕ್ಕೆ ಹಿಂತಿರುಗಿದರು.

ಅರ್ಥ:
ದೇವ: ಭಗವಂತ; ಶಿಷ್ಯ: ವಿದ್ಯಾರ್ಥಿ; ಪರಿಭಾವಿಸು: ವಿಚಾರಮಾಡು; ಅರಿ: ತಿಳಿ; ಆಣೆ: ಪ್ರಮಾಣ; ಸುತ: ಮಗ; ಬಿಡು: ತೊರೆ; ವಧೆ: ಸಾವು; ಬಿಜಯಂಗೈ: ದಯಮಾಡಿಸು; ಮಂದಿರ: ಆಲಯ; ತಿರುಗು: ಹಿಂದಿರುಗು; ವಿಗಡ: ಶೌರ್ಯ, ಭಯಂಕರ; ಮುನಿ: ಋಷಿ; ಖೇದ: ದುಃಖ; ಕಲುಷಿತ: ಅಪವಿತ್ರವಾದ, ರೋಷಗೊಂಡ; ತಿಳುಹು: ತಿಳಿಸು, ಸಂತೈಸು;

ಪದವಿಂಗಡಣೆ:
ದೇವ +ನಿಮ್ಮಯ +ಶಿಷ್ಯನೇ +ಪರಿ
ಭಾವಿಸೆನು +ತಾನ್+ಅರಿದೆನಾದಡೆ
ದೇವಕೀಸುತನಾಣೆ +ಬಿಟ್ಟೆನು +ಸಂಜಯನ +ವಧೆಯ
ನೀವು +ಬಿಜಯಂಗೈವುದ್+ಎನೆ +ಬದ
ರಾವಳಿಮಂದಿರಕೆ+ ತಿರುಗಿದನ್
ಆ +ವಿಗಡಮುನಿ +ಖೇದ+ಕಲುಷಿತ+ ಸಂಜಯನ +ತಿಳುಹಿ

ಅಚ್ಚರಿ:
(೧) ವ್ಯಾಸರನ್ನು ಕರೆದ ಪರಿ – ವಿಗಡಮುನಿ, ದೇವ
(೨) ಸಂಜಯನ ಸ್ಥಿತಿಯನ್ನು ವಿವರಿಸುವ ಪರಿ – ಖೇದಕಲುಷಿತ
(೩) ದೇವ ಪದದ ಬಳಕೆ – ದೇವ, ದೇವಕೀಸುತ