ಪದ್ಯ ೨೯: ಶಲ್ಯನೆದುರು ಯುದ್ಧ ಮಾಡಲು ಯಾರು ನಿಂತರು?

ಚೆಲ್ಲಿತದು ನಾನಾಮುಖಕೆ ನಿಂ
ದಲ್ಲಿ ನಿಲ್ಲದೆ ಸೃಂಜಯಾದ್ಯರ
ನಲ್ಲಿ ಕಾಣೆನು ಸೋಮಕರ ಪಾಂಚಾಲಮೋಹರವ
ಕೆಲ್ಲೆಯಲಿ ಭೀಮಾರ್ಜುನರು ಬಲು
ಬಿಲ್ಲನೊದರಿಸೆ ಕದನಚೌಪಟ
ಮಲ್ಲ ತಾನಿದಿರಾಗಿ ನಿಂದನು ಪಾಂಡವರ ರಾಯ (ಶಲ್ಯ ಪರ್ವ, ೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದ ಸೋಮಕ ಪಾಂಚಾಲ ಸೃಂಜಯರ ಸೈನ್ಯವು ರಣರಂಗವನ್ನು ಬಿಟ್ಟುಹೋಯಿತು. ಅಕ್ಕ ಪಕ್ಕದಲ್ಲಿ ಭೀಮಾರ್ಜುನರು ಧನುಷ್ಠಂಕಾರವನ್ನು ಮಾಡುತ್ತಿರಲು, ಶತ್ರು ಸಂಹಾರಕನಾದ ಯುಧಿಷ್ಠಿರನು ಶಲ್ಯನಿಗೆ ಇದಿರಾಗಿ ನಿಂತನು.

ಅರ್ಥ:
ಚೆಲ್ಲು: ಹರಡು; ಮುಖ: ಆನನ; ನಿಂದು: ನಿಲ್ಲು; ಆದಿ: ಮುಂತಾದ; ಕಾಣು: ತೋರು; ಮೋಹರ: ಯುದ್ಧ; ಕೆಲ್ಲೆ: ಸಿಗುರು, ಸಿಬುರು; ಬಲು: ಹೆಚ್ಚು; ಬಿಲ್ಲು: ಚಾಪ; ಒದರು: ಕೊಡಹು, ಜಾಡಿಸು; ಕದನ: ಯುದ್ಧ; ಚೌಪಟಮಲ್ಲ: ನಾಲ್ಕು ದಿಕ್ಕಿನಲ್ಲಿಯೂ ಯುದ್ಧ ಮಾಡುವವನು, ವೀರ; ಇದಿರು: ಎದುರು; ನಿಂದನು: ನಿಲ್ಲು; ರಾಯ: ರಾಜ;

ಪದವಿಂಗಡಣೆ:
ಚೆಲ್ಲಿತದು+ ನಾನಾಮುಖಕೆ+ ನಿಂ
ದಲ್ಲಿ +ನಿಲ್ಲದೆ +ಸೃಂಜಯಾದ್ಯರನ್
ಅಲ್ಲಿ +ಕಾಣೆನು +ಸೋಮಕರ +ಪಾಂಚಾಲ+ಮೋಹರವ
ಕೆಲ್ಲೆಯಲಿ +ಭೀಮಾರ್ಜುನರು +ಬಲು
ಬಿಲ್ಲನ್+ಒದರಿಸೆ+ ಕದನ+ಚೌಪಟ
ಮಲ್ಲ +ತಾನ್+ಇದಿರಾಗಿ +ನಿಂದನು +ಪಾಂಡವರ +ರಾಯ

ಅಚ್ಚರಿ:
(೧) ಶಲ್ಯನನ್ನು ಕದನಚೌಪಟಮಲ್ಲ ನೆಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ