ಪದ್ಯ ೧೫: ಯುದ್ಧದ ತೀವ್ರತೆ ಹೇಗಿತ್ತು?

ರಾವುತರು ಸೆಲ್ಲಿಸಿದರಗ್ಗದ
ಮಾವುತರನಾನೆಗಳ ತುಡುಕಿ ಹ
ಯಾವಳಿಯ ಬೀಸಿದರು ರಥಿಕರು ಹಾಯ್ಸಿದರು ರಥವ
ಆ ವರೂಥವನೇಳನೆಂಟ ಗ
ಜಾವಳಿಗಳಿಟ್ಟವು ಗಜಸ್ಕಂ
ಧಾವಲಂಬವ ಸೆಕ್ಕಿದರು ಸುರಗಿಯಲಿ ಸಮರಥರು (ಶಲ್ಯ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ರಾವುತರು ಮಾವುತರನ್ನು ಈಟಿಗಳಿಂದಿರಿದರು. ರಥಿಕರು ರಥವನ್ನು ನಡೆಸಿ ರಾವುತರನ್ನು ಹೊಡೆದರು. ಆನೆಗಳು ಏಳೆಂಟು ರಥಗಳನ್ನು ಒಂದೇ ಬಾರಿಗೆ ಎತ್ತಿ ಅಪ್ಪಳಿಸಿದವು. ಸಮರಥರು ಖಡ್ಗಗಳಿಂದ ಆನೆಗಳ ಕತ್ತುಗಳ ಮೇಲೆರಗಿದರು.

ಅರ್ಥ:
ರಾವುತ: ಕುದುರೆ ಸವಾರ, ಅಶ್ವಾರೋಹಿ; ಸೆಲ್ಲಹ: ಈಟಿ, ಭರ್ಜಿ; ಅಗ್ಗ: ಶ್ರೇಷ್ಠ; ಮಾವುತ: ಆನೆಗಳನ್ನು ಪಳಗಿಸುವವ; ಆನೆ: ಗಜ; ತುಡುಕು: ಹೋರಾಡು, ಸೆಣಸು; ಹಯ: ಕುದುರೆ; ಆವಳಿ: ಗುಂಪು; ಬೀಸು: ಹರಡು; ರಥಿಕ: ಕುದುರೆ ಸವಾರ; ಹಾಯ್ಸು: ಹೊಡೆ; ರಥ: ಬಂಡಿ; ವರೂಥ: ತೇರು, ರಥ; ಗಜಾವಳಿ: ಆನೆಗಳ ಗುಂಪು; ಸ್ಕಂಧ: ಹೆಗಲು, ಭುಜಾಗ್ರ; ಅವಲಂಬ: ಆಸರೆ; ಸೆಕ್ಕು: ಒಳಸೇರಿಸು, ತುರುಕು; ಸುರಗಿ: ಸಣ್ಣ ಕತ್ತಿ, ಚೂರಿ; ಸಮರಥ: ಪರಾಕ್ರಮಿ;

ಪದವಿಂಗಡಣೆ:
ರಾವುತರು +ಸೆಲ್ಲಿಸಿದರ್+ಅಗ್ಗದ
ಮಾವುತರನ್+ಆನೆಗಳ+ ತುಡುಕಿ +ಹ
ಯಾವಳಿಯ +ಬೀಸಿದರು+ ರಥಿಕರು +ಹಾಯ್ಸಿದರು +ರಥವ
ಆ +ವರೂಥವನ್+ಏಳನೆಂಟ +ಗ
ಜಾವಳಿಗಳ್+ಇಟ್ಟವು +ಗಜ+ಸ್ಕಂ
ಧಾವಲಂಬವ +ಸೆಕ್ಕಿದರು+ ಸುರಗಿಯಲಿ +ಸಮರಥರು

ಅಚ್ಚರಿ:
(೧) ರಾವುತ, ಮಾವುತ; ಹಯಾವಳಿ, ಗಜಾವಳಿ – ಪದಗಳ ಬಳಕೆ
(೨) ಸೆಕ್ಕಿದರು ಸುರಗಿಯಲಿ ಸಮರಥರು – ಸ ಕಾರದ ತ್ರಿವಳಿ ಪದ

ನಿಮ್ಮ ಟಿಪ್ಪಣಿ ಬರೆಯಿರಿ