ಪದ್ಯ ೧: ದುರ್ಯೋಧನನ ಸ್ಥಿತಿ ಹೇಗಿತ್ತು?

ಒಳಗೆ ಢಗೆ ನಗೆ ಹೊರಗೆ ಕಳವಳ
ವೊಳಗೆ ಹೊರಗೆ ನವಾಯಿ ಡಿಳ್ಳಸ
ವೊಳಗೆ ಹೊರಗೆ ಸಘಾಡಮದ ಬಲುಬೇಗೆಯೊಳಗೊಳಗೆ
ಬಲುಹು ಹೊರಗೆ ಪರಾಭವದ ಕಂ
ದೊಳಗೆ ಕಡುಹಿನ ಕಲಿತನದ ಹಳ
ಹಳಿಕೆ ಹೊರಗೆ ಮಹೀಶ ಹದನಿದು ನಿನ್ನ ನಂದನನ (ಶಲ್ಯ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ನಿನ್ನ ಮಗನ ಸ್ಥಿತಿಯನ್ನು ಕೇಳು, ಮನಸ್ಸಿನಲ್ಲಿ ಕಳವಲ, ಹೊರಗೆ ನಗೆ, ಒಳಗೆ ನಡುಕ, ಹೊರಗೆ ದರ್ಪ. ಒಳಗೆ ಬೇಗೆ ಹೊರಗೆ ಮಹಾಗರ್ವ, ಸೋಲಿನ ಅಳುಕು ಒಳಗೆ ಮಹಾಪರಾಕ್ರಮದ ದರ್ಪ ಹೊರಗೆ ಎಂದು ಸಂಜಯನು ಹೇಳಿದನು.

ಅರ್ಥ:
ಒಳಗೆ: ಅಂತರ್ಯ; ಢಗೆ: ಕಾವು, ದಗೆ; ನಗೆ: ಸಂತಸ; ಹೊರಗೆ: ಆಚೆ; ಕಳವಳ: ಗೊಂದಲ; ನವಾಯಿ: ಠೀವಿ; ಡಿಳ್ಳ: ಅಂಜಿಕೆ; ಸಘಾಡ: ವೇಗ, ರಭಸ; ಮದ: ಅಹಂಕಾರ; ಬೇಗೆ: ಬೆಂಕಿ, ಕಿಚ್ಚು; ಪರಾಭವ: ಸೋಲು; ಕಂದು:ಕಳಾಹೀನ; ಕಡುಹು: ಸಾಹಸ, ಹುರುಪು; ಕಲಿ: ಶೂರ; ಹಳಹಳಿ: ರಭಸ, ತೀವ್ರತೆ; ಮಹೀಶ: ರಾಜ; ಹದ: ಸ್ಥಿತಿ; ನಂದನ: ಮಗ;

ಪದವಿಂಗಡಣೆ:
ಒಳಗೆ +ಢಗೆ +ನಗೆ +ಹೊರಗೆ+ ಕಳವಳವ್
ಒಳಗೆ +ಹೊರಗೆ +ನವಾಯಿ +ಡಿಳ್ಳಸವ್
ಒಳಗೆ +ಹೊರಗೆ +ಸಘಾಡ+ಮದ +ಬಲುಬೇಗೆ+ಒಳಗೊಳಗೆ
ಬಲುಹು +ಹೊರಗೆ +ಪರಾಭವದ+ ಕಂದ್
ಒಳಗೆ +ಕಡುಹಿನ +ಕಲಿತನದ +ಹಳ
ಹಳಿಕೆ +ಹೊರಗೆ +ಮಹೀಶ +ಹದನಿದು +ನಿನ್ನ +ನಂದನನ

ಅಚ್ಚರಿ:
(೧) ಒಳಗೆ ಹೊರಗೆ ಪದಗಳ ಬಳಕೆ
(೨) ಒಳಗೆ – ೧-೩, ೫ ಸಾಲಿನ ಮೊದಲ ಪದ

ನಿಮ್ಮ ಟಿಪ್ಪಣಿ ಬರೆಯಿರಿ