ಪದ್ಯ ೩೦: ಯುದ್ಧದ ಭೀಕರತೆ ಹೇಗಿತ್ತು?

ಬಾಲಸೂರ್ಯನವೊಲ್ ಪ್ರತಿಕ್ಷಣ
ದೇಳಿಗೆಯ ತೇಜದ ವಿಕಾರ ಚ
ಡಾಳಿಸಿತು ವಿಕ್ರಮದ ಝಳ ಜಗವಳುಕೆ ಝೊಂಪಿಸಿತು
ಹೇಳಲೇನರ್ಜುನನ ಭೀಮನ
ಸೋಲವದು ತಾ ಮೃತ್ಯುವೀ ಪರಿ
ಕಾಳೆಗವ ನಾನರಿಯೆನಮರಾಸುರರ ಥಟ್ಟಿನಲಿ (ದ್ರೋಣ ಪರ್ವ, ೧೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸಂಜಯನು ಹೇಳಿದನು, ದ್ರೋಣನ ತೇಜಸ್ಸು ಬಾಲ ಸೂರ್ಯನನಂತೆ ಪ್ರತಿಕ್ಷಣಕ್ಕೂ ಹೆಚ್ಚಾಗುತ್ತಿತ್ತು. ಅವನ ಗೆಲುವಿನ ಝಳಕ್ಕೆ ಜಗತ್ತು ಅಳುಕಿತು. ಅರ್ಜುನನೂ ಭೀಮನೂ ಒಟ್ಟಾಗಿ ಕಾದಿ ಸೋತು ಹೋದುದು ಮರಣಕ್ಕೆ ಸಮಾನವಾದಂತಿತ್ತು. ದೇವ ದಾನವರ ಸೈನ್ಯಗಳ ಕಾಳಗಗಳಲ್ಲೂ ಇಂತಹ ಕಾಳಗವನ್ನು ನಾನು ಕೇಳಿಲ್ಲ ಎಂದು ಯುದ್ಧದ ಭೀಕರತೆಯನ್ನು ವಿವರಿಸಿದನು.

ಅರ್ಥ:
ಬಾಲ: ಚಿಕ್ಕ; ಸೂರ್ಯ: ರವಿ, ಭಾನು; ಪ್ರತಿಕ್ಷಣ: ಕ್ಷಣ ಕ್ಷಣ; ಏಳಿಗೆ: ಹೆಚ್ಚು; ತೇಜ: ಪ್ರಕಾಶ; ವಿಕಾರ: ಬದಲಾವಣೆ; ಚಡಾಳಿಸು: ವೃದ್ಧಿಹೊಂದು; ಝಳ: ಪ್ರಕಾಶ; ಜಗ: ಪ್ರಪಂಚ; ಅಳುಕು: ಹೆದರು; ಝೊಂಪಿಸು: ಭಯಗೊಳ್ಳು; ಹೇಳು: ತಿಳಿಸು; ಸೋಲು: ಪರಾಭವ; ಮೃತ್ಯು: ಸಾವು; ಕಾಳೆಗ: ಯುದ್ಧ; ಅರಿ: ತಿಳಿ; ಅಮರ: ದೇವತೆ; ಅಸುರ: ರಾಕ್ಷಸ; ಥಟ್ಟು: ಗುಂಪು;

ಪದವಿಂಗಡಣೆ:
ಬಾಲಸೂರ್ಯನವೊಲ್ +ಪ್ರತಿಕ್ಷಣದ್
ಏಳಿಗೆಯ +ತೇಜದ +ವಿಕಾರ +ಚ
ಡಾಳಿಸಿತು +ವಿಕ್ರಮದ +ಝಳ +ಜಗವ್+ಅಳುಕೆ +ಝೊಂಪಿಸಿತು
ಹೇಳಲೇನ್+ಅರ್ಜುನನ +ಭೀಮನ
ಸೋಲವದು+ ತಾ +ಮೃತ್ಯುವ್+ಈ+ ಪರಿ
ಕಾಳೆಗವ+ ನಾನರಿಯೆನ್+ಅಮರ+ಅಸುರರ +ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಾಲಸೂರ್ಯನವೊಲ್ ಪ್ರತಿಕ್ಷಣದೇಳಿಗೆಯ ತೇಜದ ವಿಕಾರ ಚಡಾಳಿಸಿತು
(೨) ಉದ್ಧದ ತೀವ್ರತೆ – ಈ ಪರಿ ಕಾಳೆಗವ ನಾನರಿಯೆನಮರಾಸುರರ ಥಟ್ಟಿನಲಿ

ನಿಮ್ಮ ಟಿಪ್ಪಣಿ ಬರೆಯಿರಿ