ಕಲಹವೆನು ಕನಸಿನಲಿ ಕಂಡ
ವ್ವಳಿಸಿ ಹಳುಹಳು ಪೂತು ಸಾರಥಿ
ಭಲರೆ ಸಾರಥಿ ಜಾಗುರೆನುತಿರ್ದುದು ಮಹಾರಥರು
ತೊಲಗದಿರಿ ತಿನ್ನಡಗನಹಿತನ
ತಿಳಿರಕುತವನು ಸುರಿಯೆನುತ ಕಳ
ವಳಿಸುತಿರ್ದರು ವೀರರೆರಡೊಡ್ಡಿನಲಿ ರಭಸದಲಿ (ದ್ರೋಣ ಪರ್ವ, ೧೭ ಸಂಧಿ, ೧೧ ಪದ್ಯ)
ತಾತ್ಪರ್ಯ:
ಎರಡೂ ಸೈನ್ಯಗಳ ರಥಿಕರು ಮಲಗಿ ಕನಸಿನಲ್ಲಿ ಯುದ್ಧಮಾಡುತ್ತಾ, ಬೇಗ, ಬೇಗ ಭಲೇ ಸಾರಥಿ ಜಾಗು ಎನ್ನುತ್ತಿದ್ದರು. ಓಡದಿರಿ, ವಿಅರಿಯು ಮಾಂಸವನ್ನು ತಿನ್ನು ರಕ್ತವನ್ನು ಸುರಿದುಕೋ ಎನ್ನುತ್ತಾ ಜೋರಾಗಿ ಕನವರಿಸುತ್ತಿದ್ದರು.
ಅರ್ಥ:
ಕಲಹ: ಯುದ್ಧ; ಕನಸು: ಸ್ವಪ್ನ; ಕಂಡು: ನೋಡು; ಅವ್ವಳಿಸು: ಆರ್ಭಟಿಸು; ಹಳು:ಹಗುರವಾದುದು; ಪೂತು: ಭಲೆ; ಸಾರಥಿ: ಸೂತ; ಜಾಗು: ಎಚ್ಚರ; ತಡಮಾಡು; ಮಹಾರಥ: ಪರಾಕ್ರಮಿ; ತೊಲಗು: ದೂರ ಸರಿ; ಅಹಿ: ವೈರಿ; ತಿಳಿ: ಸ್ವಚ್ಛತೆ, ನೈರ್ಮಲ್ಯ; ರಕುತ: ನೆತ್ತರು; ಸುರಿ: ಮೇಲಿನಿಂದ ಬೀಳು; ಕಳವಳ: ಗೊಂದಲ; ವೀರ: ಶೂರ; ಒಡ್ಡು: ರಾಶಿ, ಸಮೂಹ; ರಭಸ: ವೇಗ;
ಪದವಿಂಗಡಣೆ:
ಕಲಹವೆನು +ಕನಸಿನಲಿ +ಕಂಡ್
ಅವ್ವಳಿಸಿ +ಹಳುಹಳು +ಪೂತು +ಸಾರಥಿ
ಭಲರೆ+ ಸಾರಥಿ+ ಜಾಗುರೆನುತಿರ್ದುದು +ಮಹಾರಥರು
ತೊಲಗದಿರಿ+ ತಿನ್ನಡಗನ್+ಅಹಿತನ
ತಿಳಿ+ರಕುತವನು +ಸುರಿಯೆನುತ +ಕಳ
ವಳಿಸುತಿರ್ದರು +ವೀರರ್+ಎರಡ್+ಒಡ್ಡಿನಲಿ +ರಭಸದಲಿ
ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಲಹವೆನು ಕನಸಿನಲಿ ಕಂಡವ್ವಳಿಸಿ
(೨) ತ ಕಾರದ ತ್ರಿವಳಿ ಪದ – ತೊಲಗದಿರಿ ತಿನ್ನಡಗನಹಿತನ ತಿಳಿರಕುತವನು