ಪದ್ಯ ೪೨: ಕರ್ಣನು ಗದೆಯನ್ನು ಹೇಗೆ ನಾಶ ಮಾಡಿದನು?

ತಿರುಗುತೈತಹ ಪರಿಘ ಕಾಂತರೆ
ಗಿರಿಗಳಡಿ ಮೇಲಹವು ನಾವಿ
ನ್ನರಸ ಹೇಳುವುದೇನು ಕರ್ಣನ ಬಾಹುವಿಕ್ರಮವ
ಪರಿಘವದು ಪರಮಾಣುಮಯವಾ
ಯ್ತೆರಡುಶರದಲಿ ಸಾರಥಿಯನಿ
ಟ್ಟೊರಸಿದನು ಹದಿನೈದು ಶರದಲಿ ರಥದ ಕುದುರೆಗಳ (ದ್ರೋಣ ಪರ್ವ, ೧೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ತಿರುಗುತ್ತಾ ಬಂದ ಗದೆಯನ್ನು ತಡೆದರೆ ಬೆಟ್ಟಗಳೇ ತಳಮೇಲಾಗಬೇಕು, ಆದರೆ ಧೃತರಾಷ್ಟ್ರ, ಕ್ಕರ್ಣನ ಭುಜಬಲವನ್ನು ಹೇಗೆ ವರ್ಣಿಸಲಿ. ಎರಡು ಬಾಣಗಳಿಗೆ ಆ ಗದೆಯು ಪುಡಿ ಪುಡಿಯಾಯಿತು. ಎರಡು ಬಾಣಗಳಿಂದ ಘಟೋತ್ಕಚನ ಸಾರಥಿಯನ್ನೂ ಹದಿನೈದು ಬಾಣಗಳಿಂದ ರಥದ ಕುದುರೆಗಳನ್ನೂ ಹೊಡೆದುರುಳಿಸಿದನು.

ಅರ್ಥ:
ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಐತರು: ಬಂದು ಸೇರು; ಪರಿಘ: ಗದೆ; ಗಿರಿ: ಬೆಟ್ಟ; ಅಡಿ: ಕೆಳಗೆ; ಮೇಲೆ: ಎತ್ತರದಲ್ಲಿ; ಅರಸ: ರಾಜ; ಹೇಳು: ತಿಳಿಸು; ಬಾಹು: ತೋಳು ; ವಿಕ್ರಮ: ಪರಾಕ್ರಮ; ಪರಿಘ: ಗದೆ; ಪರಮಾಣು: ಅತ್ಯಂತ ಸಣ್ಣದಾದ ವಸ್ತು; ಶರ: ಬಾಣ; ಸಾರಥಿ: ಸೂತ; ಒರಸು: ನಾಶ; ರಥ: ಬಂಡಿ; ಕುದುರೆ: ಅಶ್ವ;

ಪದವಿಂಗಡಣೆ:
ತಿರುಗುತ್+ಐತಹ +ಪರಿಘ +ಕಾಂತರೆ
ಗಿರಿಗಳಡಿ +ಮೇಲಹವು +ನಾವಿನ್
ಅರಸ +ಹೇಳುವುದೇನು +ಕರ್ಣನ +ಬಾಹು+ವಿಕ್ರಮವ
ಪರಿಘವದು+ ಪರಮಾಣುಮಯವಾಯ್ತ್
ಎರಡು+ಶರದಲಿ +ಸಾರಥಿಯನಿಟ್ಟ್
ಒರಸಿದನು +ಹದಿನೈದು +ಶರದಲಿ +ರಥದ +ಕುದುರೆಗಳ

ಅಚ್ಚರಿ:
(೧) ಗದೆಯು ಪುಡಿಯಾಯಿತು ಎಂದು ಹೇಳುವ ಪರಿ – ಪರಿಘವದು ಪರಮಾಣುಮಯವಾಯ್ತೆರಡುಶರದಲಿ
(೨) ಗದೆಯ ಶಕ್ತಿಯನ್ನು ವರ್ಣಿಸುವ ಪರಿ – ತಿರುಗುತೈತಹ ಪರಿಘ ಕಾಂತರೆ ಗಿರಿಗಳಡಿ ಮೇಲಹವು

ನಿಮ್ಮ ಟಿಪ್ಪಣಿ ಬರೆಯಿರಿ