ತಿರುಗುತೈತಹ ಪರಿಘ ಕಾಂತರೆ
ಗಿರಿಗಳಡಿ ಮೇಲಹವು ನಾವಿ
ನ್ನರಸ ಹೇಳುವುದೇನು ಕರ್ಣನ ಬಾಹುವಿಕ್ರಮವ
ಪರಿಘವದು ಪರಮಾಣುಮಯವಾ
ಯ್ತೆರಡುಶರದಲಿ ಸಾರಥಿಯನಿ
ಟ್ಟೊರಸಿದನು ಹದಿನೈದು ಶರದಲಿ ರಥದ ಕುದುರೆಗಳ (ದ್ರೋಣ ಪರ್ವ, ೧೬ ಸಂಧಿ, ೪೨ ಪದ್ಯ)
ತಾತ್ಪರ್ಯ:
ತಿರುಗುತ್ತಾ ಬಂದ ಗದೆಯನ್ನು ತಡೆದರೆ ಬೆಟ್ಟಗಳೇ ತಳಮೇಲಾಗಬೇಕು, ಆದರೆ ಧೃತರಾಷ್ಟ್ರ, ಕ್ಕರ್ಣನ ಭುಜಬಲವನ್ನು ಹೇಗೆ ವರ್ಣಿಸಲಿ. ಎರಡು ಬಾಣಗಳಿಗೆ ಆ ಗದೆಯು ಪುಡಿ ಪುಡಿಯಾಯಿತು. ಎರಡು ಬಾಣಗಳಿಂದ ಘಟೋತ್ಕಚನ ಸಾರಥಿಯನ್ನೂ ಹದಿನೈದು ಬಾಣಗಳಿಂದ ರಥದ ಕುದುರೆಗಳನ್ನೂ ಹೊಡೆದುರುಳಿಸಿದನು.
ಅರ್ಥ:
ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಐತರು: ಬಂದು ಸೇರು; ಪರಿಘ: ಗದೆ; ಗಿರಿ: ಬೆಟ್ಟ; ಅಡಿ: ಕೆಳಗೆ; ಮೇಲೆ: ಎತ್ತರದಲ್ಲಿ; ಅರಸ: ರಾಜ; ಹೇಳು: ತಿಳಿಸು; ಬಾಹು: ತೋಳು ; ವಿಕ್ರಮ: ಪರಾಕ್ರಮ; ಪರಿಘ: ಗದೆ; ಪರಮಾಣು: ಅತ್ಯಂತ ಸಣ್ಣದಾದ ವಸ್ತು; ಶರ: ಬಾಣ; ಸಾರಥಿ: ಸೂತ; ಒರಸು: ನಾಶ; ರಥ: ಬಂಡಿ; ಕುದುರೆ: ಅಶ್ವ;
ಪದವಿಂಗಡಣೆ:
ತಿರುಗುತ್+ಐತಹ +ಪರಿಘ +ಕಾಂತರೆ
ಗಿರಿಗಳಡಿ +ಮೇಲಹವು +ನಾವಿನ್
ಅರಸ +ಹೇಳುವುದೇನು +ಕರ್ಣನ +ಬಾಹು+ವಿಕ್ರಮವ
ಪರಿಘವದು+ ಪರಮಾಣುಮಯವಾಯ್ತ್
ಎರಡು+ಶರದಲಿ +ಸಾರಥಿಯನಿಟ್ಟ್
ಒರಸಿದನು +ಹದಿನೈದು +ಶರದಲಿ +ರಥದ +ಕುದುರೆಗಳ
ಅಚ್ಚರಿ:
(೧) ಗದೆಯು ಪುಡಿಯಾಯಿತು ಎಂದು ಹೇಳುವ ಪರಿ – ಪರಿಘವದು ಪರಮಾಣುಮಯವಾಯ್ತೆರಡುಶರದಲಿ
(೨) ಗದೆಯ ಶಕ್ತಿಯನ್ನು ವರ್ಣಿಸುವ ಪರಿ – ತಿರುಗುತೈತಹ ಪರಿಘ ಕಾಂತರೆ ಗಿರಿಗಳಡಿ ಮೇಲಹವು