ದಾನವರು ದಕ್ಕಡಾರು ಧೈರ್ಯೋ
ದ್ದಾನಶೀಲರು ಘಾಯವನು ಗಿರಿ
ಯಾನಬಾರದು ಮುಷ್ಟಿಬಲವೆಗ್ಗಳರು ಸತ್ವದಲಿ
ಈ ನಿರಂತರ ಬಾಣ ರಚನಾ
ನೂನ ಧನುರಭ್ಯಾಸದನುವನ
ದೇನ ಹೇಳುವೆ ಲೇಸೆನುತ ಕಲಿಕರ್ಣ ತೆಗೆದೆಚ್ಚ (ದ್ರೋಣ ಪರ್ವ, ೧೬ ಸಂಧಿ, ೩೫ ಪದ್ಯ)
ತಾತ್ಪರ್ಯ:
ರಾಕ್ಷಸರು ಶೂರರು, ಅಪರಿಮಿತ ಧೈರ್ಯಶಾಲಿಗಳು, ಅವರ ಹೊಡೆತವನ್ನು ಬೆಟ್ಟವೂ ಸಹಿಸಲಾರದು. ಮುಷ್ಟಿ ಬಲದಲ್ಲಿ ಹೆಚ್ಚಿದವರು. ಈ ರೀತಿ ನಿರಂತರ ಬಾಣ ಪ್ರಯೋಗದ ರೀತಿಯನ್ನು ಹೇಗೆಂದು ಹೊಗಳಲಿ, ಬಲು ಚೆನ್ನು ಎನ್ನುತ್ತಾ ಕರ್ಣನು ಬಾಣಗಳನ್ನು ಬಿಟ್ಟನು.
ಅರ್ಥ:
ದಾನವ: ರಾಕ್ಷಸ; ದಕ್ಕಡ: ಸಾಹಸಿ; ಧೈರ್ಯ: ಎದೆಗಾರಿಕೆ, ಕೆಚ್ಚು; ಉದ್ದಾನ: ಅಪರಿಮಿತ; ಶೀಲ: ನಡತೆ, ಸ್ವಭಾವ; ಘಾಯ: ಪೆಟ್ಟು; ಗಿರಿ: ಬೆಟ್ಟ; ಮುಷ್ಟಿ: ಮುಚ್ಚಿದ ಅಂಗೈ, ಮುಟ್ಟಿಗೆ; ವೆಗ್ಗಳ: ಶ್ರೇಷ್ಠತೆ, ಹಿರಿಮೆ; ಸತ್ವ: ಸಾರ; ನಿರಂತರ: ಯಾವಾಗಲು; ಬಾಣ: ಶರ; ರಚನೆ: ನಿರ್ಮಾಣ, ಸೃಷ್ಟಿ; ನೂನ: ಕೊರತೆ, ನ್ಯೂನತೆ; ಧನು: ಬಿಲ್ಲು; ಅಭ್ಯಾಸ: ವ್ಯಾಸಂಗ; ಅನುವು: ವ್ಯಾಸಂಗ; ಹೇಳು: ತಿಳಿಸು; ಲೇಸು: ಒಳಿತು; ಕಲಿ: ಶೂರ; ಎಚ್ಚು: ಬಾಣ ಪ್ರಯೋಗ ಮಾಡು;
ಪದವಿಂಗಡಣೆ:
ದಾನವರು +ದಕ್ಕಡಾರು +ಧೈರ್ಯೋ
ದ್ದಾನ+ಶೀಲರು +ಘಾಯವನು +ಗಿರಿ
ಯಾನಬಾರದು+ ಮುಷ್ಟಿಬಲ+ವೆಗ್ಗಳರು +ಸತ್ವದಲಿ
ಈ +ನಿರಂತರ+ ಬಾಣ +ರಚನಾ
ನೂನ +ಧನುರ್+ಅಭ್ಯಾಸದ್+ಅನುವನದ್
ಏನ +ಹೇಳುವೆ +ಲೇಸೆನುತ +ಕಲಿಕರ್ಣ +ತೆಗೆದೆಚ್ಚ
ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ದಾನವರು ದಕ್ಕಡಾರು ಧೈರ್ಯೋದ್ದಾನಶೀಲರು