ದುಗುಡವೋ ಮೇಣ್ ವಿಕ್ರಮಾಗ್ನಿಯ
ತಗಹುಗಳ ತನಿಹೊಗೆಯೊ ರಾಯರ
ಮೊಗವ ನೋಡೈ ಕೀರ್ತಿಕೌಮುದಿ ಕಳಿದ ಕತ್ತಲೆಯೊ
ಬಿಗಿದ ಭೀತಿಯ ಸೂರೆಗಳೊ ಮೋ
ರೆಗಳೊ ಸವಿವಾತುಗಳ ಸೋನೆಯ
ಸೊಗಸುಕಾರರು ನಿಂದ ನಿಲವನು ಕರ್ಣ ನೋಡೆಂದ (ದ್ರೋಣ ಪರ್ವ, ೧೬ ಸಂಧಿ, ೨೪ ಪದ್ಯ)
ತಾತ್ಪರ್ಯ:
ಇವರಿಗೇನು ದುಃಖವಾಗಿದೆಯೋ ಅಥವಾ ದೈತ್ಯನ ವಿಕ್ರಮಾಗ್ನಿಯ ಹೊಗೆಯಾವರಿಸಿದೆಯೋ? ಈ ರಾಜರ ಮುಖವನ್ನು ಸ್ವಲ್ಪ ನೋಡು. ಇವರ ಮುಖವನ್ನು ನೋಡಿದರೆ ಕೀರ್ತಿಯ ಬೆಳದಿಂಗಳು ಕಳೆದು ಕತ್ತಲೆ ಆವರಿಸಿದೆಯೋ? ಇವರಿಂದ ಭಯ ಹೊರಸೂಸುತ್ತಿದೆಯೋ ಎನ್ನಿಸುತ್ತಿದೆ. ಯಾವಾಗಲೂ ಸವಿಮಾತುಗಳನ್ನಾಡುತ್ತಾ ಉತ್ಸಾಹದಿಂದಿದ್ದ ಇವರು ನಿಂತಿರುವ ಭಂಗಿಯನ್ನು ನೋಡು ಎಂದು ಕೌರವನು ಕರ್ಣನಿಗೆ ಹೇಳಿದನು.
ಅರ್ಥ:
ದುಗುಡ: ದುಃಖ; ಮೇಣ್: ಅಥವ; ವಿಕ್ರಮಾಗ್ನಿ: ಪರಾಕ್ರಮದ ಬೆಂಕಿ; ತಗಹು: ಅಡ್ಡಿ, ತಡೆ; ತನಿ: ಚೆನ್ನಾಗಿ ಬೆಳೆದುದು, ಹೆಚ್ಚಾಗು; ಹೊಗೆ: ಧೂಮ; ರಾಯ: ರಾಜ; ಮೊಗ: ಮುಖ; ನೋಡು: ವೀಕ್ಷಿಸು; ಕೀರ್ತಿ: ಖ್ಯಾತಿ; ಕೌಮುದಿ: ಬೆಳದಿಂಗಳು; ಕಳಿ: ಕಳೆದುಹೋಗು; ಕತ್ತಲೆ: ಅಂಧಕಾರ; ಬಿಗಿ: ಭದ್ರವಾಗಿರುವುದು; ಭೀತಿ: ಭಯ; ಸೂರೆ: ಕೊಳ್ಳೆ, ಲೂಟಿ; ಮೋರೆ: ಮುಖ; ಸವಿ: ರುಚಿ, ಸ್ವಾದ; ಸವಿವಾತು: ಸಿಹಿಯಾದ ಮಾತು; ಸೋನೆ: ಮಳೆ, ತುಂತುರು ಹನಿ; ಸೊಗಸು: ಅಂದ; ನಿಲುವು: ನಿಂತಿರುವ ಭಂಗಿ; ನೋಡು: ವೀಕ್ಷಿಸು;
ಪದವಿಂಗಡಣೆ:
ದುಗುಡವೋ +ಮೇಣ್ +ವಿಕ್ರಮಾಗ್ನಿಯ
ತಗಹುಗಳ +ತನಿ+ಹೊಗೆಯೊ +ರಾಯರ
ಮೊಗವ +ನೋಡೈ +ಕೀರ್ತಿಕೌಮುದಿ +ಕಳಿದ+ ಕತ್ತಲೆಯೊ
ಬಿಗಿದ +ಭೀತಿಯ +ಸೂರೆಗಳೊ+ ಮೋ
ರೆಗಳೊ +ಸವಿವಾತುಗಳ +ಸೋನೆಯ
ಸೊಗಸುಕಾರರು +ನಿಂದ +ನಿಲವನು+ ಕರ್ಣ +ನೋಡೆಂದ
ಅಚ್ಚರಿ:
(೧) ರೂಪಕದ ಪ್ರಯೋಗ – ಕೀರ್ತಿಕೌಮುದಿ ಕಳಿದ ಕತ್ತಲೆಯೊ; ವಿಕ್ರಮಾಗ್ನಿಯ ತಗಹುಗಳ ತನಿಹೊಗೆಯೊ