ಪದ್ಯ ೧೨: ಕೌರವರ ಧೈರ್ಯವೇಕೆ ಹಾರಿತು?

ಗರುಡನುಬ್ಬಟೆಗಹಿನಿಕರ ಜ
ಜ್ಝರಿತವಾದವೊಲಿವನ ಕಡು ನಿ
ಬ್ಬರದ ಧಾಳಿಗೆ ಧೈರ್ಯಗೆಟ್ಟುದು ಕೂಡೆ ಕುರುಸೇನೆ
ಹೊರಳಿಯೊಡೆದರು ಭಟರು ಸಿಡಿದರು
ಜರುಗಿದರು ಜವಗುಂದಿದರು ಮಡ
ಮುರಿದು ಬಿರುದರು ತಣಿದುದೈ ಪರಿಭವದ ಸೂರೆಯಲಿ (ದ್ರೋಣ ಪರ್ವ, ೧೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಗರುಡನ ದಾಳಿಗೆ ಹಾವುಗಳು ಜರ್ಝರಿತವಾದ ಹಾಗೆ, ಘಟೋತ್ಕಚನ ನಿಷ್ಠುರ ದಾಳಿಗೆ ಕುರುಸೈನ್ಯದ ಧೈರ್ಯ ಹಾರಿಹೋಯಿತು. ಸೈನಿಕರು ಕಂಡಕಂಡ ಕಡೆಗಳಿಗೋಡಿದರು. ಹೊಡೆತಗಳಿಗೆ ಸಿಡಿದರು. ಧೈರ್ಯಗುಂದಿದರು. ಬಿರುದುಳ್ಳ ಭಟರು ಸೋಲಿನ ಸೂರೆಯಲ್ಲಿ ತೃಪ್ತಿಹೊಂದಿದರು.

ಅರ್ಥ:
ಗರುಡ: ಖಗದ ಜಾತಿ; ಉಬ್ಬಟೆ: ಅತಿಶಯ; ಅಹಿ: ಹಾವು; ನಿಕರ: ಗುಂಪು; ಜರ್ಜ್ಝರಿತ: ಚೂರು ಚೂರಾಗು; ಕಡು: ಬಹಳ; ನಿಬ್ಬರ: ಅತಿಶಯ, ಹೆಚ್ಚಳ; ಧಾಳಿ: ಆಕ್ರಮಣ; ಧೈರ್ಯ: ಎದೆಗಾರಿಕೆ, ಕೆಚ್ಚು; ಹೊರಳು: ತಿರುವು, ಬಾಗು; ಒಡೆ: ಸೀಳು; ಭಟ: ಸೈನಿಕ; ಸಿಡಿ: ಸೀಳು; ಜರುಗು: ಪಕ್ಕಕ್ಕೆ ಸರಿ, ಜರಿ; ಜವ: ಯಮ; ಕುಂದು: ಕೊರತೆ, ನೂನ್ಯತೆ; ಮಡ: ಪಾದದ ಹಿಂಭಾಗ, ಹಿಮ್ಮಡಿ; ಮುರಿ: ಸೀಳು; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ತಣಿ: ತೃಪ್ತಿಹೊಂದು; ಪರಿಭವ: ಅಪಮಾನ, ಸೋಲು; ಸೂರೆ: ಕೊಳ್ಳೆ, ಲೂಟಿ;

ಪದವಿಂಗಡಣೆ:
ಗರುಡನ್+ಉಬ್ಬಟೆಗ್+ಅಹಿ+ನಿಕರ+ ಜ
ಜ್ಝರಿತವಾದವೊಲ್+ಇವನ +ಕಡು +ನಿ
ಬ್ಬರದ +ಧಾಳಿಗೆ +ಧೈರ್ಯ+ಕೆಟ್ಟುದು +ಕೂಡೆ +ಕುರುಸೇನೆ
ಹೊರಳಿ+ಒಡೆದರು +ಭಟರು +ಸಿಡಿದರು
ಜರುಗಿದರು +ಜವ+ಕುಂದಿದರು +ಮಡ
ಮುರಿದು +ಬಿರುದರು +ತಣಿದುದೈ +ಪರಿಭವದ +ಸೂರೆಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗರುಡನುಬ್ಬಟೆಗಹಿನಿಕರ ಜಜ್ಝರಿತವಾದವೊಲಿ

ನಿಮ್ಮ ಟಿಪ್ಪಣಿ ಬರೆಯಿರಿ