ರಥಚಯವ ನುಗ್ಗೊತ್ತಿದನು ಸಾ
ರಥಿಗಳನು ಸೀಳಿದನು ಸುಮಹಾ
ರಥರ ಬಿಂಕದ ಬಿಗುಹ ಮುರಿದನು ಹೊಕ್ಕು ಬೀದಿಯಲಿ
ಶಿಥಿಲವಾಯಿತು ವೈರಿಬಲವತಿ
ಮಥನವಾಯಿತು ದೈತ್ಯನೂಳಿಗ
ಪೃಥುವಿ ಲಘುತರವಾಯ್ತು ಫಣಿಪನ ಕೊರಳು ಸೈನಿಮಿರೆ (ದ್ರೋಣ ಪರ್ವ, ೧೫ ಸಂಧಿ, ೬೭ ಪದ್ಯ)
ತಾತ್ಪರ್ಯ:
ಬಕಾಸುರನ ಮಗನ ಸೇನೆಯ ರಥಗಳನ್ನು ಪುಡಿಯಾಗುವಂತೆ ಕುಕ್ಕಿದನು. ಸಾರಥಿಗಳನ್ನು ಸೀಳಿದನು. ಮಹಾರಥರ ನಡುವೆ ನುಗ್ಗಿ ಅವರ ಬಿಂಕವನ್ನು ಮುರಿದನು. ವೈರಿ ಸೈನ್ಯವು ಬಲಹೀನವಾಯಿತು. ಘಟೋತ್ಕಚನ ಹಾವಳಿ ಮಿತಿ ಮೀರಿತು. ಭೂಮಿಯ ಭಾರವು ಕುಗ್ಗಿದುದರಿಂದ ಆದಿಶೇಷನ ಕೊರಳು ನೆಟ್ಟನೆ ನಿಂತಿತು.
ಅರ್ಥ:
ರಥ: ಬಂಡಿ; ಚಯ: ಸಮೂಹ, ರಾಶಿ; ನುಗ್ಗು: ತಳ್ಳು; ಒತ್ತು: ಆಕ್ರಮಿಸು, ಮುತ್ತು; ಸಾರಥಿ: ಸೂತ; ಸೀಳು: ಕಡಿದು ಹಾಕು; ಮಹಾರಥ: ಪರಾಕ್ರಮಿ; ಬಿಂಕ: ಗರ್ವ, ಜಂಬ; ಬಿಗುಹು: ಗಟ್ಟಿ; ಮುರಿ: ಸೀಳು; ಹೊಕ್ಕು: ಸೇರು; ಬೀದಿ: ಮಾರ್ಗ; ಶಿಥಿಲ: ದೃಢವಲ್ಲದ; ವೈರಿ: ಶತ್ರು; ಬಲ: ಶಕ್ತಿ; ಮಥನ: ನಾಶ; ದೈತ್ಯ: ರಾಕ್ಷಶ; ಊಳಿಗ: ಕೆಲಸ, ಕಾರ್ಯ; ಪೃಥು: ಭೂಮಿ; ಲಘು: ಭಾರವಿಲ್ಲದ; ಫಣಿ: ಹಾವು; ಕೊರಳು: ಕಂಠ; ನಿಮಿರು: ನೆಟ್ಟಗಾಗು;
ಪದವಿಂಗಡಣೆ:
ರಥ+ಚಯವ +ನುಗ್+ಒತ್ತಿದನು +ಸಾ
ರಥಿಗಳನು +ಸೀಳಿದನು +ಸುಮಹಾ
ರಥರ +ಬಿಂಕದ +ಬಿಗುಹ +ಮುರಿದನು +ಹೊಕ್ಕು +ಬೀದಿಯಲಿ
ಶಿಥಿಲವಾಯಿತು +ವೈರಿಬಲವ್+ಅತಿ
ಮಥನವಾಯಿತು +ದೈತ್ಯನ್+ಊಳಿಗ
ಪೃಥುವಿ +ಲಘುತರವಾಯ್ತು +ಫಣಿಪನ+ ಕೊರಳು +ಸೈನಿಮಿರೆ
ಅಚ್ಚರಿ:
(೧) ರೂಪಕದ ಪ್ರಯೋಗ – ಪೃಥುವಿ ಲಘುತರವಾಯ್ತು ಫಣಿಪನ ಕೊರಳು ಸೈನಿಮಿರೆ
(೨) ರಥ, ರಥಿ, ರಥ – ೧-೩ ಸಾಲಿನ ಪದಗಳ ರಚನೆ