ಪದ್ಯ ೨೩: ಸೈನ್ಯವು ಹೇಗೆ ಸಿದ್ಧವಾಯಿತು?

ನರನ ಕರೆ ಕರೆ ಸಿಂಧುರಾಜನ
ಹರಿಬವೆಮ್ಮದು ತಮ್ಮದೆಂದ
ಬ್ಬರಿಸಿ ನೂಕಿತು ಕದನ ಲಂಪಟರಾಗಿ ಪಟುಭಟರು
ಸರಿಸದಲಿ ಲಟಕಟಿಸಿ ಮೋಹರ
ಮರಳಿ ನಿಂದುದು ರಣಕೆ ರಜನೀ
ಚರರ ಥಟ್ಟಣೆ ಧಾತುಗೆಡಿಸಿತು ದಿಟ್ಟರುಬ್ಬಟೆಯ (ದ್ರೋಣ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯುದ್ಧ ಲಂಪಟರಾದ ವೀರರು, ಸೈಂಧವನ ಸೇಡು ನಮ್ಮದು, ಅರ್ಜುನನನ್ನು ಕರೆಯಿರಿ ಎಂದು ಅಬ್ಬರಿಸಿ ನುಗ್ಗಿದರು. ಒಂದೇ ಸಾಲಿನಲ್ಲಿ ಉತ್ಸಾಹಿಸಿ ಸೈನ್ಯವು ರಾತ್ರಿಯಲ್ಲಿ ನಿಂತಿತು. ಅವರ ಉತ್ಸಾಹವು ಶತ್ರು ವೀರರ ಧೈರ್ಯವನ್ನು ಅಲುಗಾಡಿಸಿತು.

ಅರ್ಥ:
ನರ: ಅರ್ಜುನ; ಕರೆ: ಬರೆಮಾಡು; ರಾಜ: ಅರಸ; ಹರಿಬ: ಕೆಲಸ, ಕಾರ್ಯ; ಅಬ್ಬರಿಸು: ಗರ್ಜಿಸು; ನೂಕು: ತಳ್ಳು; ಕದನ: ಯುದ್ಧ; ಲಂಪಟ: ವಿಷಯಾಸಕ್ತ, ಕಾಮುಕ; ಪಟುಭಟ: ಪರಾಕ್ರಮಿ; ಸರಿಸ:ನೇರವಾಗಿ, ಸರಳವಾಗಿ; ಲಟಕಟ: ಉದ್ರೇಕ, ಚಕಿತನಾಗು; ಮೋಹರ: ಯುದ್ಧ; ಮರಳಿ: ಹಿಂದಿರುಗು ನಿಂದು: ನಿಲ್ಲು; ರಣ: ಯುದ್ಧ; ರಜನೀ: ರಾತ್ರಿ; ಚರರು: ಓಡಾಡುವ; ಥಟ್ಟಣೆ: ಗುಂಪು; ಧಾತು: ತೇಜಸ್ಸು, ಮೂಲವಸ್ತು; ಕೆಡಿಸು: ಹಾಳುಮಾಡು; ದಿಟ್ಟ: ವೀರ; ಉಬ್ಬಟೆ: ಅತಿಶಯ, ಹಿರಿಮೆ;

ಪದವಿಂಗಡಣೆ:
ನರನ +ಕರೆ +ಕರೆ +ಸಿಂಧುರಾಜನ
ಹರಿಬವ್+ಎಮ್ಮದು +ತಮ್ಮದೆಂದ್
ಅಬ್ಬರಿಸಿ +ನೂಕಿತು +ಕದನ +ಲಂಪಟರಾಗಿ +ಪಟುಭಟರು
ಸರಿಸದಲಿ +ಲಟಕಟಿಸಿ +ಮೋಹರ
ಮರಳಿ +ನಿಂದುದು +ರಣಕೆ +ರಜನೀ
ಚರರ +ಥಟ್ಟಣೆ +ಧಾತುಗೆಡಿಸಿತು +ದಿಟ್ಟರ್+ಉಬ್ಬಟೆಯ

ಅಚ್ಚರಿ:
(೧) ಶೂರರ ಉತ್ಸಾಹ – ಅಬ್ಬರಿಸಿ ನೂಕಿತು ಕದನ ಲಂಪಟರಾಗಿ ಪಟುಭಟರು
(೨) ಲಟಕಟಿಸಿ, ಲಂಪಟ – ಲ ಕಾರದ ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ