ಪದ್ಯ ೩೪: ಅರ್ಜುನನು ಮಹಾಸ್ತ್ರವನ್ನು ಎಲ್ಲಿ ಪಠಿಸಿದನು?

ಕರೆದು ಸಾತ್ಯಕಿ ಭೀಮನನು ನೃಪ
ವರನ ಸುಯ್ದಾನದಲಿ ನಿಲಿಸಿದ
ನರಿಬಲಕೆ ನೂಕಿದನು ಕೈಕೆಯ ಚೈದ್ಯ ಸೃಂಜಯರ
ಮುರಮಥನನೊಡಗೂಡಿ ನಿಜ ಮೋ
ಹರವನಂದೈನೂರು ಬಿಲ್ಲಿಂ
ತರಕೆ ತೊಲಗಿ ಮಹಾಸ್ತ್ರಮಂತ್ರವ ಜಪಿಸಿದನು ಪಾರ್ಥ (ದ್ರೋಣ ಪರ್ವ, ೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರ್ಜುನನು ಸಾತ್ಯಕಿ ಭೀಮರನ್ನು ಕರೆದು ದೊರೆಯನ್ನು ರಕ್ಷಿಸಲು ನಿಲಿಸಿದನು. ಕೈಕೆಯ ಚೈದ್ಯ ಸೃಂಜಯರ ಸೈನ್ಯಗಳನ್ನು ಶತ್ರು ಸೈನ್ಯವನ್ನೆದುರಿಸಲು ಕಳಿಸಿದನು. ಅರ್ಜುನನು ಸೈನ್ಯದಿಂದ ಐದು ನೂರು ಬಿಲ್ಲುಗಳ ದೂರ ಹೋಗಿ ಮಹಾಸ್ತ್ರ ಮಂತ್ರವನ್ನು ಜಪಿಸಿದನು.

ಅರ್ಥ:
ಕರೆದು: ಬರೆಮಾಡು; ನೃಪ: ರಾಜ; ವರ: ಶ್ರೇಷ್ಠ; ಸುಯ್ದಾನ: ರಕ್ಷಣೆ; ನಿಲಿಸು: ಸ್ಥಿತವಾಗಿರು; ಅರಿ: ವೈರಿ; ಬಲ; ಸೈನ್ಯ; ನೂಕು: ತಳ್ಳು; ಮುರಮಥನ: ಕೃಷ್ಣ; ಒಡಗೂಡು: ಜೊತೆ; ಮೋಹರ: ಯುದ್ಧ; ಅಂತರ: ದೂರ; ತೊಲಗು: ಹೋಗು; ಅಸ್ತ್ರ: ಶಸ್ತ್ರ, ಆಯುಧ; ಜಪಿಸು: ಪಠಿಸು, ಮಂತ್ರಿಸು;

ಪದವಿಂಗಡಣೆ:
ಕರೆದು +ಸಾತ್ಯಕಿ +ಭೀಮನನು +ನೃಪ
ವರನ +ಸುಯ್ದಾನದಲಿ +ನಿಲಿಸಿದನ್
ಅರಿಬಲಕೆ +ನೂಕಿದನು +ಕೈಕೆಯ +ಚೈದ್ಯ +ಸೃಂಜಯರ
ಮುರಮಥನನ್+ಒಡಗೂಡಿ +ನಿಜ +ಮೋ
ಹರವನಂದ್+ಐನೂರು +ಬಿಲ್ಲಂ
ತರಕೆ+ ತೊಲಗಿ +ಮಹಾಸ್ತ್ರಮಂತ್ರವ +ಜಪಿಸಿದನು +ಪಾರ್ಥ

ನಿಮ್ಮ ಟಿಪ್ಪಣಿ ಬರೆಯಿರಿ