ಪದ್ಯ ೬: ಅಭಿಮನ್ಯುವಿನ ಯುದ್ಧವು ಯಾರನ್ನು ನಾಚಿಸಿತು?

ಕೆಡೆದ ರಥ ಸಲೆ ಕಾಂಚನಾದ್ರಿಯ
ನಡಸಿದವು ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ
ಕಡಲುವರಿವರುಣಾಂಬು ಜಲಧಿಗೆ
ಬಿಡಿಸಿದವು ಬಿಂಕವನು ಶಿವ ಶಿವ
ನುಡಿಪ ಕವಿ ಯಾರಿನ್ನು ಪಾರ್ಥ ಕುಮಾರನಾಹವವ (ದ್ರೋಣ ಪರ್ವ, ೬ ಸಂಧಿ, ೬ ಪದ್ಯ)

ತಾತ್ಪರ್ಯ:
ಮುರಿದು ಬಿದ್ದ ರಥಗಳ ರಾಶಿಯನ್ನು ಕಂಡು ಮೇರುಪರ್ವತ ನಾಚಿತು, ಹಾರಿದ ತಲೆಗಳು ತುಂಬಿದುದರಿಂದ ಆಕಾಶ ನಾಚಿತು, ಹರಿದು ಕಡಲಾದ ರಕ್ತವು ಸಮುದ್ರದ ಬಿಂಕವನ್ನು ಬಿಡಿಸಿತು, ಅಬ್ಬಬ್ಬಾ ಶಿವ ಶಿವಾ ಅಭಿಮನ್ಯುವಿನ ಯುದ್ಧವನ್ನು ವರ್ಣಿಸುವ ಕರಿ ಯಾರು?

ಅರ್ಥ:
ಕೆಡೆ: ಬೀಳು, ಕುಸಿ; ರಥ: ಬಂಡಿ, ತೇರು; ಕಾಂಚನ: ಚಿನ್ನ; ಅದ್ರಿ: ಬೆಟ್ಟ; ಅಡಸು: ಬಿಗಿಯಾಗಿ ಒತ್ತು; ನಾಚಿಕೆ: ಲಜ್ಜೆ; ಅಭ್ರ: ಆಗಸ; ಇಡಿ: ಚಚ್ಚು, ಕುಟ್ಟು; ತಲೆ: ಶಿರ; ಬೀರು: ಒಗೆ, ಎಸೆ; ಭಂಗ: ಮುರಿಯುವಿಕೆ; ಅನುಪಮ: ಹೋಲಿಕೆಗೆ ಮೀರಿದ; ಅಂಬರ: ಆಗಸ; ಕಡಲು: ಸಾಗರ; ಅರುಣಾಂಬು: ಕೆಂಪಾದ ನೀರು (ರಕ್ತ); ಜಲಧಿ: ಸಾಗರ; ಬಿಡಿಸು: ತೊರೆ; ಬಿಂಕ: ಗರ್ವ, ಜಂಬ; ನುಡಿ: ಮಾತು; ಕವಿ: ಆವರಿಸು; ಕುಮಾರ: ಮಗ; ಆಹವ: ಯುದ್ಧ;

ಪದವಿಂಗಡಣೆ:
ಕೆಡೆದ +ರಥ +ಸಲೆ +ಕಾಂಚನ+ಅದ್ರಿಯನ್
ಅಡಸಿದವು +ನಾಚಿಕೆಯನ್+ಅಭ್ರದೊಳ್
ಇಡಿಯೆ +ತಲೆ +ಬೀರಿದವು +ಭಂಗವನ್+ಅನುಪಮ+ಅಂಬರಕೆ
ಕಡಲುವರಿವ್+ಅರುಣಾಂಬು +ಜಲಧಿಗೆ
ಬಿಡಿಸಿದವು+ ಬಿಂಕವನು +ಶಿವ +ಶಿವ
ನುಡಿಪ +ಕವಿ +ಯಾರಿನ್ನು +ಪಾರ್ಥ +ಕುಮಾರನ್+ಆಹವವ

ಅಚ್ಚರಿ:
(೧) ರೂಪಕದ ಪ್ರಯೋಗ – ಕೆಡೆದ ರಥ ಸಲೆ ಕಾಂಚನಾದ್ರಿಯನಡಸಿದವು; ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ; ಕಡಲುವರಿವರುಣಾಂಬು ಜಲಧಿಗೆ ಬಿಡಿಸಿದವು ಬಿಂಕವನು

ನಿಮ್ಮ ಟಿಪ್ಪಣಿ ಬರೆಯಿರಿ