ಪದ್ಯ ೨೫: ಅಭಿಮನ್ಯುವು ಶಿಶುವೆಂದು ಹೇಳಲಾದೀತೆ?

ಹಸುಳೆತನದಲಿ ಹರನ ಮಗನಾ
ವಿಷಮ ದೈತ್ಯನ ಸೀಳಿ ಬಿಸುಡನೆ
ಶಿಶುವಲಾ ಪ್ರದ್ಯುಮ್ನ ಮುರಿಯನೆ ಶಂಬರಾಸುರನ
ಶಿಶುವೆ ನೋಡಭಿಮನ್ಯು ಸುಭಟ
ಪ್ರಸರದಿನಿಬರನೊಂದು ಘಾಯದೊ
ಳುಸಿರ ತಗೆಬಗೆ ಮಾಡಿದನು ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಷಣ್ಮುಖನು ತಾರಕಾಸುರನನ್ನು ಸೀಳೀಹಾಕಲಿಲ್ಲವೇ? ಶಿಸುವಾದ ಪ್ರದ್ಯುಮ್ನನು ಶಂಬರಾಸುರನನ್ನು ಸಂಹರಿಸಲಿಲ್ಲವೇ? ಅಭಿಮನ್ಯುವು ಬಾಲಕನೇ? ತನಗೆದುರಾದ ವೀರರನ್ನು ಒಂದೇ ಹೊಡೆತಕ್ಕೆ ಉಸಿರನ್ನು ತೆಗೆಯುವವ ಹಾಗೆ ಹೊಡೆದನು.

ಅರ್ಥ:
ಹಸುಳೆ: ಚಿಕ್ಕ ಮಗು; ಹರ: ಶಿವ; ಮಗ: ಪುತ್ರ; ವಿಷಮ: ಕಷ್ಟಕರವಾದುದು; ದೈತ್ಯ: ರಾಕ್ಷಸ; ಸೀಳು: ಚೂರು, ತುಂಡು; ಬಿಸುಡು: ಹೊರಹಾಕು; ಶಿಶು: ಮಗು; ಮುರಿ: ಸೀಳು; ಅಸುರ: ರಾಕ್ಷಸ; ನೋಡು: ವೀಕ್ಷಿಸು; ಸುಭಟ: ಪರಾಕ್ರಮಿ; ಪ್ರಸರ: ಹರಡು; ಇನಿಬರು: ಇಷ್ಟುಜನ; ಘಾಯ: ಪೆಟ್ಟು, ನೋವು; ಉಸಿರು: ಜೀವ; ತಗೆ: ಹೊರಹಾಕು; ಕೇಳು: ಆಲಿಸು;

ಪದವಿಂಗಡಣೆ:
ಹಸುಳೆತನದಲಿ +ಹರನ +ಮಗನ್+ಆ
ವಿಷಮ +ದೈತ್ಯನ +ಸೀಳಿ +ಬಿಸುಡನೆ
ಶಿಶುವಲಾ +ಪ್ರದ್ಯುಮ್ನ +ಮುರಿಯನೆ +ಶಂಬರಾಸುರನ
ಶಿಶುವೆ ನೋಡ್+ಅಭಿಮನ್ಯು +ಸುಭಟ
ಪ್ರಸರದ್+ಇನಿಬರನೊಂದು +ಘಾಯದೊಳ್
ಉಸಿರ +ತಗೆಬಗೆ +ಮಾಡಿದನು +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಹೋಲಿಕೆಯನ್ನು ನೀಡುವ ಪರಿ – ಹಸುಳೆತನದಲಿ ಹರನ ಮಗನಾ ವಿಷಮ ದೈತ್ಯನ ಸೀಳಿ ಬಿಸುಡನೆ
ಶಿಶುವಲಾ ಪ್ರದ್ಯುಮ್ನ ಮುರಿಯನೆ ಶಂಬರಾಸುರನ
(೨) ಹಸುಳೆ, ಶಿಶು – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ