ಪದ್ಯ ೧೫: ಪದ್ಮವ್ಯೂಹದ ಮೊದಲ ಸಾಲು ಏನಾಯಿತು?

ಎಸಳ ಮೊನೆ ಮೋಹರದ ಸಂದಣಿ
ಯುಸಿರನುಳಿದುದು ಕೇಸರಾಕೃತಿ
ಯಸಮ ವೀರರು ಪಥಿಕರಾದರು ಗಗನಮಾರ್ಗದಲಿ
ನುಸುಳಿದರು ಕರ್ಣಿಕೆಯ ಕಾಹಿನ
ವಸುಮತೀಶರು ರಾಯನರನೆಲೆ
ದೆಸೆಗೆಸಲು ಮೊಳಗಿದನು ಪಾರ್ಥಕುಮಾರನಳವಿಯಲಿ (ದ್ರೋಣ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪದ್ಮವ್ಯೂಹದ ತುದಿಯ ದಳದ ಸೈನ್ಯವು ನಾಶವಾಯಿತು. ಕೇಸರಾಕೃತಿಯಲ್ಲಿ ನಿಂತ ವೀರರು ಆಕಾಶಮಾರ್ಗದಲ್ಲಿ ನಡೆದರು. ಕರ್ಣಿಕೆಯನ್ನು ಕಾದುಕೊಳ್ಳುವ ರಾಜರು ಇಲ್ಲವಾದರು ದುರ್ಯೋಧನನ ನೆಲೆಯ ಮೇಲೆ ಅಭಿಮನ್ಯುವು ಗರ್ಜಿಸುತ್ತಾ ನುಗ್ಗಿದನು.

ಅರ್ಥ:
ಎಸಳು: ಹೂವಿನ ದಳ; ಮೊನೆ: ತುದಿ; ಮೋಹರ: ಯುದ್ಧ; ಸಂದಣಿ: ಗುಂಪು; ಉಸಿರು: ಗಾಳಿ; ಉಳಿ: ಮಿಕ್ಕ; ಕೇಸರಾಕೃತಿ: ಸಿಂಹದ ರೂಪ; ಆಕೃತಿ: ರೂಪ; ಅಸಮ: ಸಮವಲ್ಲದ; ವೀರ: ಶೂರ; ಪಥಿಕ: ದಾರಿಗ, ಪ್ರಯಾಣಿಕ; ಗಗನ: ಆಗಸ; ಮಾರ್ಗ: ದಾರಿ; ನುಸುಳು: ನುಣುಚಿಕೊಳ್ಳುವಿಕೆ; ಕರ್ಣಿಕೆ: ಕಮಲದ ಮಧ್ಯ ಭಾಗ, ಬೀಜಕೋಶ; ಕಾಹು: ಕಾಪಾಡು; ವಸುಮತೀಶ: ರಾಜ; ರಾಯ: ರಾಜ; ನೆಲೆ: ಭೂಮಿ; ಎಸಗು: ಕೆಲಸ, ಉದ್ಯೋಗ; ಮೊಳಗು: ಧ್ವನಿ, ಸದ್ದು; ಕುಮಾರ: ಪುತ್ರ; ಅಳವಿ: ಯುದ್ಧ;

ಪದವಿಂಗಡಣೆ:
ಎಸಳ+ ಮೊನೆ +ಮೋಹರದ +ಸಂದಣಿ
ಉಸಿರನ್+ಉಳಿದುದು +ಕೇಸರಾಕೃತಿ
ಅಸಮ +ವೀರರು +ಪಥಿಕರಾದರು+ ಗಗನಮಾರ್ಗದಲಿ
ನುಸುಳಿದರು +ಕರ್ಣಿಕೆಯ +ಕಾಹಿನ
ವಸುಮತೀಶರು+ ರಾಯನರನ್+ಎಲೆ
ದೆಸೆಗೆಸಲು +ಮೊಳಗಿದನು +ಪಾರ್ಥಕುಮಾರನ್+ಅಳವಿಯಲಿ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಕೇಸರಾಕೃತಿಯಸಮ ವೀರರು ಪಥಿಕರಾದರು ಗಗನಮಾರ್ಗದಲಿ

ನಿಮ್ಮ ಟಿಪ್ಪಣಿ ಬರೆಯಿರಿ