ಇವರು ಭೀಷ್ಮನ ಬೀಳುಕೊಂಡು
ತ್ಸವದ ಹರುಷದಲೊಮ್ಮೆ ಗಂಗಾ
ಭವಗೆ ತಪ್ಪಿದ ದುಗುಡ ಭಾರದಲೊಮ್ಮೆ ಚಿಂತಿಸುತ
ಕವಲು ಮನದಲಿ ಕಂಪಿಸುತ ಶಿಬಿ
ರವನು ಹೊಕ್ಕರು ನಿಖಿಲ ಸೇನಾ
ನಿವಹ ಸಹಿತವೆ ವೀರ ನಾರಾಯಣನ ಕರುಣದಲಿ (ಭೀಷ್ಮ ಪರ್ವ, ೧೦ ಸಂಧಿ, ೪೩ ಪದ್ಯ)
ತಾತ್ಪರ್ಯ:
ಪಾಂಡವರು ಭೀಷ್ಮನನ್ನು ಬೀಳುಕೊಂಡು ಒಮ್ಮೆ ಸಂತಸ ಒಮ್ಮೆ ಭೀಷ್ಮನಿಗೆ ತಪ್ಪಿದೆವೆಂಬ ದುಃಖಗಳ ಕವಲು ಮನಸ್ಸಿನಿಂದ ವೀರ ನಾರಾಯಣನ ಕರುಣೆಯಿಂದ ತಮ್ಮ ಶಿಬಿರಗಳನ್ನು ಹೊಕ್ಕರು.
ಅರ್ಥ:
ಬೀಳುಕೊಂಡು: ತೆರಳು; ಉತ್ಸವ: ಸಂಭ್ರಮ; ಹರುಷ: ಸಂತಸ; ಭವ: ಹುಟ್ಟು; ತಪ್ಪು: ಸರಿಯಲ್ಲದ; ದುಗುಡ: ದುಃಖ; ಭಾರ: ಹೊರೆ; ಚಿಂತಿಸು: ಯೋಚಿಸು; ಕವಲು: ಟಿಸಿಲು, ಭಿನ್ನತೆ; ಮನ: ಮನಸ್ಸು; ಕಂಪಿಸು: ನಡುಗು; ಶಿಬಿರ: ಪಾಳೆಯ; ಹೊಕ್ಕು: ಸೇರು; ನಿಖಿಲ: ಎಲ್ಲಾ; ನಿವಹ: ಗುಂಪು; ಸಹಿತ: ಜೊತೆ; ಕರುಣ: ದಯೆ;
ಪದವಿಂಗಡಣೆ:
ಇವರು +ಭೀಷ್ಮನ +ಬೀಳುಕೊಂಡ್
ಉತ್ಸವದ +ಹರುಷದಲ್+ಒಮ್ಮೆ+ ಗಂಗಾ
ಭವಗೆ +ತಪ್ಪಿದ +ದುಗುಡ +ಭಾರದಲ್+ಒಮ್ಮೆ +ಚಿಂತಿಸುತ
ಕವಲು +ಮನದಲಿ +ಕಂಪಿಸುತ +ಶಿಬಿ
ರವನು +ಹೊಕ್ಕರು +ನಿಖಿಲ +ಸೇನಾ
ನಿವಹ +ಸಹಿತವೆ +ವೀರ +ನಾರಾಯಣನ +ಕರುಣದಲಿ
ಅಚ್ಚರಿ:
(೧) ಪಾಂಡವರ ಸ್ಥಿತಿ – ಕವಲು ಮನದಲಿ ಕಂಪಿಸುತ ಶಿಬಿರವನು ಹೊಕ್ಕರು