ಅಳಿದರೊಡಹುಟ್ಟಿದರು ಹಲಬರು
ನೆಲನ ರಾಯರು ಸವೆದರತಿ ಬಲ
ರಳುಕುವರು ನರನೆಂದಡೀ ದ್ರೋಣಾದಿ ನಾಯಕರು
ಅಲಗಿನಂಬಿನ ಹಕ್ಕೆ ನಮಗಾ
ಯ್ತೊಳಜಗಳ ಸಾಕಿನ್ನು ಸೋದರ
ರೊಳಗೆ ಸಂಪ್ರತಿಯಾಗಿ ಬದುಕುವದೆಂದನಾ (ಭೀಷ್ಮ ಪರ್ವ, ೧೦ ಸಂಧಿ, ೩೦ ಪದ್ಯ)
ತಾತ್ಪರ್ಯ:
ಭೀಷ್ಮನು ನಿನ್ನ ಅನೇಕ ತಮ್ಮಂದಿರು ಯುದ್ಧದಲ್ಲಿ ಮಡಿದು ಹೋಗಿದ್ದಾರೆ. ಹಲವು ರಾಜರು ಇಲ್ಲವಾದರು. ದ್ರೋಣನೇ ಮೊದಲಾದ ಅತಿಬಲರಾದ ನಾಯಕರು ಅರ್ಜುನನೆಂದರೆ ಅಳುಕುತ್ತಾರೆ. ನಾನೇ ಸರಳ ಮಂಚದ ಹಾಸಿಗೆಯಲ್ಲಿ ಮಲಗುವ ಹಾಗಾಯಿತು. ಇನ್ನು ಜ್ಞಾತಿಗಳೊಡನೆ ಒಳಜಗಳ ಸಾಕು ಸಂಧಿಮಾಡಿಕೊಂಡು ಬದುಕು ಎಂದು ಭೀಷ್ಮರು ಹೇಳಿದರು.
ಅರ್ಥ:
ಅಳಿ: ನಾಶ; ಒಡಹುಟ್ಟು: ಜೊತೆಗೆ ಹುಟ್ಟಿದವರು; ಹಲಬರು: ಹಲವಾರು, ಬಹಳ; ನೆಲ: ಭೂಮಿ; ರಾಯ: ರಾಜ; ಸವೆ: ಅಳಿ, ಶಕ್ತಿಗುಂದು; ಅತಿ: ಬಹಳ; ಬಲ: ಶಕ್ತಿ; ಅಳುಕು: ಹೆದರು; ನರ: ಅರ್ಜುನ; ನಾಯಕ: ಒಡೆಯ; ಅಲಗು: ಆಯುಧಗಳ ಹರಿತವಾದ ಅಂಚು; ಅಂಬು: ಬಾಣ; ಹಕ್ಕೆ: ಹಾಸುಗೆ, ಶಯ್ಯೆ; ಜಗಳ: ಕಾದಾಟ; ಸಾಕು: ನಿಲ್ಲಿಸು; ಸೋದರ: ಅಣ್ಣ ತಮ್ಮ; ಸಂಪ್ರತಿ: ಒಪ್ಪಂದ; ಬದುಕು: ಜೀವಿಸು;
ಪದವಿಂಗಡಣೆ:
ಅಳಿದರ್+ಒಡಹುಟ್ಟಿದರು+ ಹಲಬರು
ನೆಲನ +ರಾಯರು +ಸವೆದರ್+ಅತಿ+ ಬಲರ್
ಅಳುಕುವರು +ನರನೆಂದಡ್+ಈ+ ದ್ರೋಣಾದಿ +ನಾಯಕರು
ಅಲಗಿನ್+ಅಂಬಿನ +ಹಕ್ಕೆ +ನಮಗಾಯ್ತ್
ಒಳಜಗಳ +ಸಾಕಿನ್ನು +ಸೋದರ
ರೊಳಗೆ +ಸಂಪ್ರತಿಯಾಗಿ +ಬದುಕುವದ್+ಎಂದನಾ
ಅಚ್ಚರಿ:
(೧) ಭೀಷ್ಮರ ಸಲಹೆ – ಸೋದರರೊಳಗೆ ಸಂಪ್ರತಿಯಾಗಿ ಬದುಕುವದೆಂದನಾ
(೨) ಅಳಿ, ಸವೆ – ಸಾಮ್ಯಾರ್ಥ ಪದ