ಪದ್ಯ ೧೯: ಸೈನ್ಯದ ನಂತರ ಭೀಷ್ಮನೆದುರು ಯಾರು ನಿಂತರು?

ಆಳು ಮುರಿದವು ಮೇಲೆ ಹೊಕ್ಕು ನೃ
ಪಾಲಕರು ಬೊಬ್ಬಿರಿದು ಭೀಷ್ಮನ
ಕೋಲಕೊಳ್ಳಎ ಕೊಂಡು ಹರಿದರು ರಥದ ಹೊರೆಗಾಗಿ
ಆಳುತನದಂಗವಣೆಯೊಳ್ಳಿತು
ಮೇಳವೇ ಬಳಿಕೇನು ಪೃಥ್ವೀ
ಪಾಲರಲ್ಲಾ ಪೂತು ಮಝ ಎನುತೆಚ್ಚನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸೈನ್ಯವು ಪುಡಿಯಾದ ಮೇಲೆ ರಾಜರು, ಭೀಷ್ಮನ ಬಾಣಗಳನ್ನು ಲೆಕ್ಕಿಸದೆ, ಭೀಷ್ಮನೆದುರಿಗೆ ಬಂದು ನಿಂತರು. ಭೀಷ್ಮನು ನಿಮ್ಮ ಪರಾಕ್ರಮ ಹಿರಿದಾದುದು, ಎಷ್ಟೇ ಆಗಲಿ ನೀವು ರಾಜರಲ್ಲವೇ ಎನ್ನುತ್ತಾ ಅವರ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಆಳು: ಸೈನಿಕ; ಮುರಿ: ಸೀಳು; ಹೊಕ್ಕು: ಸೇರು; ನೃಪಾಲ: ರಾಜ; ಬೊಬ್ಬಿರಿದು: ಅರಚು; ಕೋಲ: ಬಾಣ; ಹರಿ: ಸೀಳು; ರಥ: ಬಂಡಿ; ಹೊರೆ: ರಕ್ಷಣೆ, ಆಶ್ರಯ; ಆಳುತನ: ಪರಾಕ್ರಮ; ಅಂಗವಣೆ: ರೀತಿ, ಬಯಕೆ; ಒಳ್ಳಿತು: ಸರಿಯಾದ; ಮೇಳ: ಗುಂಪು; ಬಳಿಕ: ನಂತರ; ಪೃಥ್ವೀಪಾಲ: ರಾಜ; ಪೃಥ್ವಿ: ಭೂಮಿ; ಪೂತ: ಪುಣ್ಯವಂತ; ಮಝ: ಭಲೇ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಆಳು+ ಮುರಿದವು +ಮೇಲೆ +ಹೊಕ್ಕು +ನೃ
ಪಾಲಕರು+ ಬೊಬ್ಬಿರಿದು +ಭೀಷ್ಮನ
ಕೋಲಕೊಳ್ಳದೆ+ ಕೊಂಡು+ ಹರಿದರು +ರಥದ +ಹೊರೆಗಾಗಿ
ಆಳುತನದ್+ಅಂಗವಣೆ+ಒಳ್ಳಿತು
ಮೇಳವೇ +ಬಳಿಕೇನು +ಪೃಥ್ವೀ
ಪಾಲರಲ್ಲಾ +ಪೂತು +ಮಝ +ಎನುತ್+ಎಚ್ಚನಾ +ಭೀಷ್ಮ

ಅಚ್ಚರಿ:
(೧) ನೃಪಾಲ, ಪೃಥ್ವೀಪಾಲ – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ