ಭುವನ ನೆರೆ ಹೊಗೆವಂದು ಹೆಚ್ಚಿದ
ಶಿವನ ಖತಿ ಮೈದೋರಿತೆನೆ ರಿಪು
ನಿವಹದಲಿ ನೆಲೆಗೊಂಡುದೀತನ ಖಾತಿ ಕೊಪ್ಪರಿಸಿ
ಜವನ ಪುರಿಗಿಂಬಿಲ್ಲ ಕೊಂಡೊ
ಯ್ವವರು ಕೈಗುಂದಿದರು ಗಂಗಾ
ಭವನು ಕೊಲುವುದ ಬಿಡನಿದೇನೆನುತಿರ್ದುದಮರಗಣ (ಭೀಷ್ಮ ಪರ್ವ, ೯ ಸಂಧಿ, ೨೨ ಪದ್ಯ)
ತಾತ್ಪರ್ಯ:
ಭೂಮಿಯು ಸುಡುವ ಕಾಲ ಬಂದಾಗ ಶಿವನೂ ಕೋಪಗೊಂಡರೆ ಹೇಗೋ ಹಾಗೆ ಭೀಷ್ಮನ ಕೋಪವು ಮತ್ತೆ ಮತ್ತೆ ಹೆಚ್ಚಿತು. ಯಮಪುರಕ್ಕೆ ಸತ್ತ ಭಟರನ್ನು ಕರೆದೊಯ್ಯಲು ಜನರಿಲ್ಲ, ಈಗ ಅವರನ್ನು ಕೊಂಡೊಯ್ಯುವವರ ಕೈಗಳು ಸೋತು ಹೋದವು, ದೇವತೆಗಳು ಇಷ್ಟಾದರೂ ಭೀಷ್ಮನೇಕೆ ಸಂಹಾರ ಕಾರ್ಯವನ್ನು ಬಿಟ್ಟಿಲ್ಲ ಎಂದು ನುಡಿದರು.
ಅರ್ಥ:
ಭುವನ: ಜಗತ್ತು, ಪ್ರಪಂಚ; ನೆರೆ: ಗುಂಪು; ಹೊಗೆ:ಸುಡು, ದಹಿಸು; ಹೆಚ್ಚು: ಅಧಿಕ; ಖತಿ: ಕೋಪ; ಮೈದೋರು: ಕಾಣಿಸು; ರಿಪು: ವೈರಿ; ನಿವಹ: ಗುಂಪು; ನೆಲೆಗೊಂಡು: ನಿಲ್ಲು; ಖಾತಿ: ಕೋಪ, ಕ್ರೋಧ; ಕೊಪ್ಪರಿಸು: ತಿವಿ, ಹೊಡೆ; ಜವ: ಯಮ; ಪುರಿ: ಊರು; ಒಯ್ಯು: ಸೇರು; ಕೈಗುಂದು: ಸೋತುಹೋಗು; ಗಂಗಾಭವ: ಭೀಷ್ಮ; ಕೊಲು: ಸಾಯಿಸು; ಬಿಡನು: ತೊರೆಯನು; ಅಮರಗಣ: ದೇವತೆಗಳು;
ಪದವಿಂಗಡಣೆ:
ಭುವನ +ನೆರೆ +ಹೊಗೆವಂದು +ಹೆಚ್ಚಿದ
ಶಿವನ +ಖತಿ +ಮೈದೋರಿತೆನೆ +ರಿಪು
ನಿವಹದಲಿ +ನೆಲೆಗೊಂಡುದ್+ಈತನ +ಖಾತಿ +ಕೊಪ್ಪರಿಸಿ
ಜವನಪುರಿಗ್+ ಇಂಬಿಲ್ಲ +ಕೊಂಡ್
ಒಯ್ವವರು+ ಕೈಗುಂದಿದರು+ ಗಂಗಾ
ಭವನು +ಕೊಲುವುದ+ ಬಿಡನ್+ಇದೇನ್+ಎನುತಿರ್ದುದ್+ಅಮರಗಣ
ಅಚ್ಚರಿ:
(೧) ಉಪಮಾನದ ಪ್ರಯೋಗ – ಭುವನ ನೆರೆ ಹೊಗೆವಂದು ಹೆಚ್ಚಿದ ಶಿವನ ಖತಿ ಮೈದೋರಿತೆನೆ