ಒಗ್ಗೊಡೆದು ರಿಪುಸೇನೆ ಸರಿದುದು
ತೆಗ್ಗಿತುಬ್ಬಾಳುಗಳ ನುಡಿ ಮನ
ನೆಗ್ಗಿದವು ಮಂಡಳಿಕರಿಗೆ ತಲೆಮುಸುಕು ಪಸರಿಸಿತು
ಲಗ್ಗೆವರೆಗಳಿಗಮಮ ಮೌನದ
ಸುಗ್ಗಿಯಾಯಿತು ಬಿರುದ ಬೈಚಿಡು
ತಗ್ಗಲೆಯರೊಳಸರಿಯೆ ಕಂಡನು ಪಾರ್ಥ ಖತಿಗೊಂಡ (ಭೀಷ್ಮ ಪರ್ವ, ೮ ಸಂಧಿ, ೩೩ ಪದ್ಯ)
ತಾತ್ಪರ್ಯ:
ಸಾಲೋಡೆದು ಪಾಂಡವ ಸೈನ್ಯ ಕೆದರಿತು, ಉಬ್ಬಿ ಉಬ್ಬಿ ಮಾತಾಡುವ ವೀರರ ಮನಸ್ಸುಗಳು ಕುಸಿದವು, ಮಾಂಡಲೀಕರು ತಲೆಯ ಮೇಲೆ ಮುಸುಕನ್ನೆಳೆದುಕೊಂಡರು. ರಣವಾದ್ಯಗಳು ಮೌನವನ್ನು ಹಿಡಿದವು, ತಮ್ಮ ಬಿರುದಿನ ಬಾವುಟಗಳನ್ನು ಮಡಿಸಿದ ವೀರರು ಹಿಂದಕ್ಕೋಡಿದರು. ಇದನ್ನು ನೋಡಿ ಅರ್ಜುನನು ಕೆರಳಿದನು.
ಅರ್ಥ:
ಒಗ್ಗು: ಗುಂಪು; ಒಡೆದು: ಮುರಿದು; ರಿಪು: ವೈರಿ; ಸೇನೆ: ಸೈನ್ಯ; ಸರಿ: ಹೋಗು, ಗಮಿಸು; ತೆಗ್ಗು: ಕಡಿಮೆಯಾಗು; ಉಬ್ಬಾಳು: ಪರಾಕ್ರಮಿ; ನುಡಿ: ಮಾತು; ಮನ: ಮನಸ್ಸು; ನೆಗ್ಗು: ಕುಗ್ಗು, ಕುಸಿ; ಮಂಡಳಿಕ: ಮಾಂಡಳೀಕರು, ಸಾಮಂತ ರಾಜ; ತಲೆ: ಶಿರ; ಮುಸುಕು: ಹೊದಿಕೆ; ಪಸರಿಸು: ಹರಡು; ಲಗ್ಗೆ: ಮುತ್ತಿಗೆ; ಮೌನ: ಶಬ್ದವಿಲ್ಲದ, ನೀರವತೆ; ಸುಗ್ಗಿ: ಸಂಭ್ರಮ; ಬಿರುದು: ಗೌರವ ಸೂಚಕ ಪದ; ಬೈಚಿಡು: ಬಚ್ಚಿಡು; ತಗ್ಗು: ಕಡಿಮೆಯಾಗು, ಬಾಗು; ಒಳಸರಿ: ಹಿಂದೆ ಸರಿ; ಕಂಡು: ನೋಡು; ಖತಿ: ಕೋಪ; ಅಮಮ: ಅಬ್ಬಬ್ಬ;
ಪದವಿಂಗಡಣೆ:
ಒಗ್ಗೊಡೆದು +ರಿಪುಸೇನೆ +ಸರಿದುದು
ತೆಗ್ಗಿತ್+ಉಬ್ಬಾಳುಗಳ ನುಡಿ +ಮನ
ನೆಗ್ಗಿದವು +ಮಂಡಳಿಕರಿಗೆ+ ತಲೆ+ಮುಸುಕು +ಪಸರಿಸಿತು
ಲಗ್ಗೆವ್+ಅರೆಗಳಿರ್+ಅಮಮ +ಮೌನದ
ಸುಗ್ಗಿಯಾಯಿತು +ಬಿರುದ +ಬೈಚಿಡು
ತಗ್ಗಲೆಯರ್+ಒಳಸರಿಯೆ +ಕಂಡನು +ಪಾರ್ಥ +ಖತಿಗೊಂಡ
ಅಚ್ಚರಿ:
(೧) ಪರಾಕ್ರಮಿಗಳು ಪರಾಭವಗೊಂಡರು ಎನ್ನುವ ಪರಿ – ತೆಗ್ಗಿತುಬ್ಬಾಳುಗಳ ನುಡಿ ಮನ ನೆಗ್ಗಿದವು ಮಂಡಳಿಕರಿಗೆ ತಲೆಮುಸುಕು ಪಸರಿಸಿತು