ಪದ್ಯ ೭: ಎರಡನೇ ದಿನದ ಯುದ್ಧವನ್ನು ಯಾರು ಗೆದ್ದರು?

ಬೀಳಲವನೀಪತಿಗಳತಿ ಹೀ
ಹಾಳಿಯಲಿ ಸಾತ್ಯಕಿ ಮುಳಿದು ಬಲು
ಗೋಲಿನಲಿ ಗಂಗಾಕುಮಾರನ ಸಾರಥಿಯನೆಸಲು
ಮೇಲುಗಾಳೆಗವವರ ಸೇರಿತು
ಸೋಲು ಕುರುಪತಿಗಾಯ್ತು ಕಿರಣದ
ಗೂಳಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ (ಭೀಷ್ಮ ಪರ್ವ, ೬ ಸಂಧಿ, ೭ ಪದ್ಯ)

ತಾತ್ಪರ್ಯ:
ಹೀಗೆ ರಾಜರು ನೆಲಕ್ಕುರುಳಲು, ಸಾತ್ಯಕಿಯು ಕೋಪದಿಂದ ಭೀಷ್ಮನ ಸಾರಥಿಯನ್ನು ಕೊಂದನು. ಆ ದಿನ ಯುದ್ಧದಲ್ಲಿ ಪಾಂಡವರು ಗೆದ್ದರು; ದುರ್ಯೋಧನನಿಗೆ ಸೋಲಾಯಿತು, ಸೂರ್ಯಕಿರಣಗಳು ಪಶ್ಚಿಮ ಸಮುದ್ರಕ್ಕೆ ಗುಳೆ ಹೊರಟವು. ಆ ದಿನದ ಯುದ್ಧ ಮುಗಿಯಿತು.

ಅರ್ಥ:
ಬೀಳು: ಕುಗ್ಗು; ಅವನೀಪತಿ: ರಾಜ; ಹೀಹಾಳಿ: ತೆಗಳಿಕೆ, ಅವಹೇಳನ; ಮುಳಿ: ಸಿಟ್ಟು, ಕೋಪ; ಬಲು: ಬಹಳ; ಕೋಲು: ಬಾಣ; ಕುಮಾರ: ಮಗ; ಸಾರಥಿ: ಸೂತ; ಎಸು: ಬಾಣ ಪ್ರಯೋಗ ಮಾಡು; ಮೇಲು: ಎತ್ತರ; ಕಾಳೆಗ: ಯುದ್ಧ; ಸೇರು: ತಲುಪು, ಮುಟ್ಟು; ಸೋಲು: ಪರಾಭವ; ಕಿರಣ: ರಶ್ಮಿ, ಬೆಳಕಿನ ಕದಿರು;
ಗೂಳೆಯ: ಊರು ಬಿಟ್ಟು ವಲಸೆ ಹೋಗುವುದು; ಪಡುವಣ: ಪಶ್ಚಿಮ; ಸಮುದ್ರ: ಸಾಗರ; ತೆಗೆ: ಈಚೆಗೆ ತರು, ಹೊರತರು; ಇನ: ಸೂರ್ಯ; ಇಳಿ: ಕೆಳಕ್ಕೆ ಬರು;

ಪದವಿಂಗಡಣೆ:
ಬೀಳಲ್+ಅವನೀಪತಿಗಳ್+ಅತಿ+ ಹೀ
ಹಾಳಿಯಲಿ +ಸಾತ್ಯಕಿ +ಮುಳಿದು +ಬಲು
ಗೋಲಿನಲಿ +ಗಂಗಾಕುಮಾರನ+ ಸಾರಥಿಯನ್+ಎಸಲು
ಮೇಲುಗಾಳೆಗವ್+ಅವರ +ಸೇರಿತು
ಸೋಲು +ಕುರುಪತಿಗಾಯ್ತು +ಕಿರಣದ
ಗೂಳಯವು +ಪಡುವಣ+ ಸಮುದ್ರಕೆ +ತೆಗೆಯನ್+ಇನನ್+ಇಳಿದ

ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ಕಿರಣದ ಗೂಳಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ

ನಿಮ್ಮ ಟಿಪ್ಪಣಿ ಬರೆಯಿರಿ