ಪದ್ಯ ೮೦: ಧರ್ಮಜನು ಹೇಗೆ ಎಲ್ಲರನ್ನು ಸತ್ಕರಿಸಿದನು?

ಯಾದವರು ಪಾಂಚಾಲ ಮತ್ಸ್ಯರು
ಮೇದಿನೀಪತಿ ಪಾಂಡು ಸೋಮಕ
ರಾದಿಯಾದನ್ವಯವನಗಣಿತ ಬಂಧು ಬಳಗವನು
ಆದರಿಸಿದನು ವಿನಯದಲಿ ವಿ
ತ್ತಾದಿ ಸತ್ಕಾರದಲಿ ದಣಿದುದು
ಮೇದಿನೀ ಜನವವನಿಪನ ಸನ್ಮಾನ ದಾನದಲಿ (ವಿರಾಟ ಪರ್ವ, ೧೧ ಸಂಧಿ, ೮೦ ಪದ್ಯ)

ತಾತ್ಪರ್ಯ:
ಯಾದವರು, ಪಾಂಚಾಲರು, ಮತ್ಸ್ಯರು, ಪಾಂಡು, ಸೋಮಕ ಮೊದಲಾದವರನ್ನು ಲೆಕ್ಕವಿಲ್ಲದಷ್ಟು ಬಂಧು ಬಳಗದವರನ್ನು ಧರ್ಮಜನು ಹಣ ಮೊದಲಾದ ವಸ್ತುಗಳಿಂದ ಸತ್ಕರಿಸಿದನು. ಸರ್ವರೂ ಧರ್ಮಜನ ಸನ್ಮಾನದಿಂದ ತೃಪ್ತರಾಗಿ ಸಂತೋಷ ಪಟ್ಟರು.

ಅರ್ಥ:
ಮೇದಿನೀಪತಿ: ರಾಜ; ಆದಿ: ಮುಂತಾದ; ಅನ್ವಯ: ವಂಶ, ಸಂಬಮ್ಧ; ಅಗಣಿತ: ಎಣಿಕೆಯಿಲ್ಲದ; ಬಳಗ: ಗುಂಪು; ಆದರಿಸು: ಗೌರವಿಸು; ವಿನಯ: ಸೌಜನ್ಯ; ವಿತ್ತ: ಹಣ; ಸತ್ಕಾರ: ಗೌರವ, ಉಪಚಾರ; ದಣಿದು: ಆಯಾಸಗೊಳ್ಳು; ಜನ: ಮನುಷ್ಯ, ಗುಂಪು; ಅವನಿಪ: ರಾಜ; ಸನ್ಮಾನ: ಗೌರವ, ಮಾನ್ಯತೆ; ದಾನ: ಚತುರೋಪಾಯಗಳಲ್ಲಿ ಒಂದು, ನೀಡು;

ಪದವಿಂಗಡಣೆ:
ಯಾದವರು +ಪಾಂಚಾಲ +ಮತ್ಸ್ಯರು
ಮೇದಿನೀಪತಿ+ ಪಾಂಡು +ಸೋಮಕ
ರಾದಿಯಾದ್+ಅನ್ವಯವನ್+ಅಗಣಿತ +ಬಂಧು +ಬಳಗವನು
ಆದರಿಸಿದನು +ವಿನಯದಲಿ +ವಿ
ತ್ತಾದಿ +ಸತ್ಕಾರದಲಿ +ದಣಿದುದು
ಮೇದಿನೀ+ ಜನವ್+ಅವನಿಪನ +ಸನ್ಮಾನ +ದಾನದಲಿ

ಅಚ್ಚರಿ:
(೧) ಸತ್ಕಾರವನ್ನು ಮಾಡಿದ ಪರಿ – ಆದರಿಸಿದನು ವಿನಯದಲಿ ವಿತ್ತಾದಿ ಸತ್ಕಾರದಲಿ ದಣಿದುದು ಮೇದಿನೀ – ಭೂಮಿಯೇ ಆಯಾಸಗೊಂಡಿತು ಎಂದು ಹೇಳುವ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ