ಪದ್ಯ ೪೧: ಉತ್ತರನು ಯಾವ ಪ್ರಶ್ನೆಗಳನ್ನು ಕೇಳಿದನು?

ಹೇಳು ಸಾರಥಿ ಬಿಲ್ಲದಾವನ
ತೋಳಿಗಳವದುವುದು ಮಹಾಶರ
ಜಾಲ ಬೆಸರಿದಪವಿದಾರಿಗೆ ಮಿಕ್ಕ ಬಿಲ್ಲುಗಳು
ಕಾಳಗದೊಳಿವನಾರು ತೆಗೆವರು
ಮೇಲುಗೈದುಗಳಾರಿಗಿವು ಕೈ
ಮೇಳವಿಸುವವು ಮನದ ಸಂಶಯ ಹಿಂಗೆ ಹೇಳೆಂದ (ವಿರಾಟ ಪರ್ವ, ೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಉತ್ತರನು ತನ್ನ ಪ್ರಶ್ನೆಗಳನ್ನು ಮುಂದುವರೆಸುತ್ತಾ, ಸಾರಥೀ ಈ ದೊಡ್ಡ ಬಿಲ್ಲು ಯಾರ ತೋಳಿನಲ್ಲಿರುತ್ತದೆ? ಈ ಮಹಾಶರಗಳು ಯಾರ ಅಧೀನದಲ್ಲಿವೆ? ಉಳಿದ ಬಿಲ್ಲುಗಳು ಯಾರವು? ಯುದ್ಧದಲ್ಲಿ ಇವನ್ನಾರು ಉಪಯೋಗಿಸುತ್ತಾರೆ? ಉಳಿದ ಆಯುಧಗಳು ಯಾರವು? ನನ್ನ ಮನಸ್ಸಿನ ಸಂಶಯವನ್ನು ನಿವಾರಿಸು ಎಂದು ಕೇಳಿದನು.

ಅರ್ಥ:
ಹೇಳು: ತಿಳಿಸು; ಸಾರಥಿ: ಸೂತ; ಬಿಲ್ಲು: ಚಾಪ; ತೋಳು: ಬಾಹು; ಅಳವಡು: ಹೊಂದು, ಸೇರು, ಕೂಡು; ಮಹಾಶರ: ದೊಡ್ಡ ಬಾಣ; ಜಾಲ: ಗುಂಪು; ಬೆಸಗೈ: ಅಪ್ಪಣೆಮಾದು; ಮಿಕ್ಕ: ಉಳಿದ; ಕಾಳಗ: ಯುದ್ಧ; ತೆಗೆ:ಹೊರತರು; ಮೇಲು: ಹಿರಿಯ, ದೊಡ್ಡ; ಕೈದು: ಆಯುಧ, ಕತ್ತಿ; ಕೈಮೇಳ: ಕೈಗೆ ಸೇರುವ; ಮನ: ಮನಸ್ಸು; ಸಂಶಯ: ಅನುಮಾನ; ಹಿಂಗು: ತಗ್ಗು; ಹೇಳು: ತಿಳಿಸು;

ಪದವಿಂಗಡಣೆ:
ಹೇಳು +ಸಾರಥಿ+ ಬಿಲ್ಲದ್+ಆವನ
ತೋಳಿಗ್+ಅಳವಡುವುದು +ಮಹಾಶರ
ಜಾಲ +ಬೆಸರಿದಪವಿದಾರಿಗೆ+ ಮಿಕ್ಕ+ ಬಿಲ್ಲುಗಳು
ಕಾಳಗದೊಳ್+ಇವನಾರು +ತೆಗೆವರು
ಮೇಲು+ಕೈದುಗಳ್+ಆರಿಗಿವು+ ಕೈ
ಮೇಳವಿಸುವವು +ಮನದ+ ಸಂಶಯ +ಹಿಂಗೆ+ ಹೇಳೆಂದ

ಅಚ್ಚರಿ:
(೧) ಹೇಳು – ಪದ್ಯದ ಮೊದಲ ಹಾಗು ಕೊನೆ ಪದ

ನಿಮ್ಮ ಟಿಪ್ಪಣಿ ಬರೆಯಿರಿ