ನುಡಿಯ ಕೇಳದೆ ಮೂಮ್ದೆ ನಾಲ್ಕೆಂ
ಟಡಿಯನರ್ಜುನ ರಥವ ನಡೆಸಲು
ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯ ನರ ತೆಗೆದು
ಹಿಡಿ ಹಯವನಿರಿಗಾರ ಸಾರಥಿ
ನುಡಿವವರು ನಾವ್ ಹಗೆಗಳೇ ನಿ
ನ್ನೊಡೆಯರಲ್ಲಾ ಸ್ವಾಮಿ ದುರುಹಿತೆ ಲೇಸು ಲೇಸೆಂದ (ವಿರಾಟ ಪರ್ವ, ೭ ಸಂಧಿ, ೧೧ ಪದ್ಯ)
ತಾತ್ಪರ್ಯ:
ಅರ್ಜುನನು ಉತ್ತರನ ಮಾತನ್ನು ಮೀರಿ ನಾಲ್ಕೆಂಟು ಅಡಿ ದೂರ ರಥವನ್ನು ನಡೆಸುವುದರೊಳಗೆ, ಉತ್ತರನ ಕೈನರಗಳು ಸಡಲಿ ಬಿಲ್ಲು ಬಾಣಗಳು ಕೆಳಗೆ ಬಿದ್ದವು. ಎಲೋ ದ್ರೋಹಿಯಾದ ಸಾರಥಿ, ಕುದುರೆಗಳನ್ನು ನಿಲ್ಲಿಸು, ಹೀಗೆ ಹೇಳುವ ನಾನು ನಿನ್ನ ಒಡೆಯ, ಶತ್ರುವಲ್ಲ, ಸ್ವಾಮಿದ್ರೋಹಿಯೇ ನಿನ್ನ ಕಾರ್ಯ ಬಲು ಚೆನ್ನಾಗಿದೆ ಎಂದು ಉತ್ತರನು ಹೇಳಿದನು.
ಅರ್ಥ:
ನುಡಿ: ಮಾತು; ಕೇಳು: ಆಲಿಸು; ಮುಂದೆ: ಎದುರು; ಅಡಿ:ಹನ್ನೆರಡು ಅಂಗುಲದ ಉದ್ದಳತೆ; ರಥ: ಬಂಡಿ; ನಡೆಸು: ಚಲಿಸು; ಹಿಡಿ ಬಂಧಿಸು; ಬಿಲ್ಲು: ಚಾಪ; ಅಂಬು: ಬಾಣ; ಬಿದ್ದು: ಕೆಳಗೆ ಬೀಳು; ಕೈ: ಹಸ್ತ; ನರ: ಅರ್ಜುನ; ತೆಗೆ: ಹೊರತರು; ಹಿಡಿ: ಗ್ರಹಿಸು; ಹಯ: ಕುದುರೆ; ಸಾರಥಿ: ಸೂತ; ಹಗೆ: ಶತ್ರು; ಒಡೆಯ: ನಾಯಕ; ದುರಹಿತ: ದ್ರೋಹ, ವಿಶ್ವಾಸಘಾತ; ಲೇಸು: ಒಳಿತು;
ಪದವಿಂಗಡಣೆ:
ನುಡಿಯ +ಕೇಳದೆ +ಮುಂದೆ+ ನಾಲ್ಕೆಂಟ್
ಅಡಿಯನ್+ಅರ್ಜುನ +ರಥವ +ನಡೆಸಲು
ಹಿಡಿದ +ಬಿಲ್ಲ್+ಅಂಬುಗಳು +ಬಿದ್ದವು +ಕೈಯ +ನರ +ತೆಗೆದು
ಹಿಡಿ +ಹಯವನ್+ಇರಿಗಾರ+ ಸಾರಥಿ
ನುಡಿವವರು +ನಾವ್ +ಹಗೆಗಳೇ+ ನಿನ್ನ್
ಒಡೆಯರಲ್ಲಾ +ಸ್ವಾಮಿ +ದುರುಹಿತೆ ಲೇಸು ಲೇಸೆಂದ
ಅಚ್ಚರಿ:
(೧) ಉತ್ತರನ ಹೆದರಿಕೆಯನ್ನು ಚಿತ್ರಿಸುವ ಪರಿ – ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯ ನರ ತೆಗೆದು
(೨) ನುಡಿ, ಅಡಿ, ಹಿಡಿ – ಪ್ರಾಸ ಪದಗಳು