ಎನಲು ಕಿರುನಗೆ ಮಿನುಗೆ ಮುಖದಲಿ
ಯನಿಲಜನು ಮಗುಳೆಂದನೇತಕೆ
ಜನಪ ಚಿಂತಿಪೆ ಸತ್ತೊಡೆನಗದು ರಾಜಕಾರ್ಯವಲೆ
ಅನುವರವ ಜಯಿಸಿದೊಡೆ ನೀವೆಂ
ದನಿತು ಮಲ್ಲರುವುತ್ತರಾಯಿಗ
ಳೆನಗೆ ನಿಮ್ಮಯ ಕರುಣ ಸಾಕೆಂದನಿಲಜನು ನುಡಿದ (ವಿರಾಟ ಪರ್ವ, ೪ ಸಂಧಿ, ೪೧ ಪದ್ಯ)
ತಾತ್ಪರ್ಯ:
ವಿರಾಟನ ಮಾತು ಕೇಳಿ ಕಿರುನಗೆಯನ್ನು ಬೀರುತ್ತಾ, ರಾಜ ನೀವೇಕೆ ಚಿಂತಿಸುವಿರಿ, ಯುದ್ಧದಲ್ಲಿ ಸೋತರೆ ಅದು ಸ್ವಾಮಿಕಾರ್ಯವಲ್ಲವೇ? ಗೆದ್ದರೆ ಮಲ್ಲರೆಲ್ಲರೂ ಗತಪ್ರಾಣರು, ನನಗೆ ನಿಮ್ಮ ಕರುಣೆಯೊಂದೇ ಸಾಕು ಎಂದು ಭೀಮನು ನುಡಿದನು.
ಅರ್ಥ:
ಕಿರುನಗೆ: ಮಂದಸ್ಮಿತ; ಮಿನುಗು: ಪ್ರಕಾಶ; ಮುಖ: ಆನನ; ಅನಿಲಜ: ವಾಯುಪುತ್ರ; ಮಗುಳು: ತಿರುಗಿ; ಜನಪ: ರಾಜ; ಚಿಂತೆ: ಯೋಚನೆ; ಸಾವು: ಮರಣ; ರಾಜಕಾರ್ಯ: ಸ್ವಾಮಿಕೆಲಸ; ಅನುವರ: ಯುದ್ಧ; ಜಯಿಸು: ಗೆಲ್ಲು; ಅನಿತು: ಅಷ್ಟು; ಮಲ್ಲ: ಜಟ್ಟಿ; ಉತ್ತರಾಯಿ: ಜವಾಬುದಾರಿ, ಬೇರೆಯವ; ಕರುಣ: ದಯೆ; ಅನಿಲಜ: ಭೀಮ; ನುಡಿ: ಮಾತಾಡು;
ಪದವಿಂಗಡಣೆ:
ಎನಲು+ ಕಿರುನಗೆ +ಮಿನುಗೆ +ಮುಖದಲಿ
ಅನಿಲಜನು +ಮಗುಳೆಂದನ್+ಏತಕೆ
ಜನಪ+ ಚಿಂತಿಪೆ+ ಸತ್ತೊಡ್+ಎನಗದು+ ರಾಜಕಾರ್ಯವಲೆ
ಅನುವರವ+ ಜಯಿಸಿದೊಡೆ +ನೀವೆಂದ್
ಅನಿತು+ ಮಲ್ಲರು+ಉತ್ತರಾಯಿಗಳ್
ಎನಗೆ+ ನಿಮ್ಮಯ +ಕರುಣ +ಸಾಕೆಂದ್+ಅನಿಲಜನು +ನುಡಿದ
ಅಚ್ಚರಿ:
(೧) ಅನಿಲಜ – ೨, ೬ ಸಾಲಿನಲ್ಲಿ ಪದ ಪ್ರಯೋಗ
(೨) ಭೀಮನು ರಾಜನಿಗೆ ಅಭಯವನ್ನು ನೀಡುವ ಪರಿ – ಏತಕೆ ಜನಪ ಚಿಂತಿಪೆ ಸತ್ತೊಡೆನಗದು ರಾಜಕಾರ್ಯವಲೆ