ಮನದೊಳಗೆ ಗುಡಿಗಟ್ಟಿದನು ಮಾ
ನಿನಿಯ ಕರುಣಾಪಾಂಗ ರಸಭಾ
ಜನವು ಪುಣ್ಯವಲಾಯೆನುತ ಬೀಳ್ಕೊಂಡನಗ್ರಜೆಯ
ಮನದೊಳೊದವಿದ ಮರುಳುತನದು
ಬ್ಬಿನಲಿ ಹೊಕ್ಕನು ಮನೆಯನಿತ್ತಲು
ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ (ವಿರಾಟ ಪರ್ವ, ೨ ಸಂಧಿ, ೫೦ ಪದ್ಯ)
ತಾತ್ಪರ್ಯ:
ಸೈರಂಧ್ರಿಯು ತನ್ನ ಮೇಲೆ ಕುಡಿನೋಟವನ್ನು ಬೀರಿದರೆ ಅದು ತನ್ನ ಪುಣ್ಯವೆಂದು ಭಾವಿಸಿ ಮನಸ್ಸಿನಲ್ಲೇ ವಿಜಯಧ್ವಜವನ್ನು ಹಾರಿಸಿದನು. ಮನಸ್ಸಿನಲ್ಲಿ ಸೈರಂಧ್ರಿಯ ಮೇಲಿನ ಹುಚ್ಚು ಹೇಚ್ಚಾಗುತ್ತಿರಲು ಮನೆಯನ್ನು ಸೇರಿಕೊಂಡನು, ಇತ್ತ ಸೂರ್ಯನು ಪಶ್ಚಿಮದ ಬೆಟ್ಟಗಳಲ್ಲಿ ಮುಳುಗಿದನು.
ಅರ್ಥ:
ಮನ: ಮನಸ್ಸು; ಗುಡಿಗಟ್ಟು: ಸಂತೋಷಗೊಳ್ಳು; ಮಾನಿನಿ: ಹೆಣ್ಣು; ಕರುಣೆ: ದಯೆ; ಅಪಾಂಗ:ಕಡೆಗಣ್ಣು; ರಸಭಾಜನ: ಸುಖಕ್ಕೆ ಭಾಗಿಯಾಗುವುದು; ಪುಣ್ಯ: ಸದಾಚಾರ; ಬೀಳ್ಕೊಳು: ತೆರಳು; ಅಗ್ರಜೆ: ಅಕ್ಕ; ಒದಗು: ಲಭ್ಯ, ದೊರೆತುದು; ಮರುಳು: ಹುಚ್ಚು; ಉಬ್ಬು: ಹೆಚ್ಚು; ಹೊಕ್ಕು: ಸೇರು; ಮನೆ: ಆಲಯ; ದಿನಕರ: ಸೂರ್ಯ; ಅಸ್ತ: ಮುಳುಗು; ಅದ್ರಿ: ಬೆಟ್ಟ; ಬೀಡು: ಆವಾಸ, ನೆಲೆ;
ಪದವಿಂಗಡಣೆ:
ಮನದೊಳಗೆ+ ಗುಡಿಗಟ್ಟಿದನು +ಮಾ
ನಿನಿಯ +ಕರುಣಾಪಾಂಗ +ರಸಭಾ
ಜನವು +ಪುಣ್ಯವಲಾ+ಎನುತ +ಬೀಳ್ಕೊಂಡಬ್+ಅಗ್ರಜೆಯ
ಮನದೊಳ್+ಒದವಿದ+ ಮರುಳುತನದ್
ಉಬ್ಬಿನಲಿ +ಹೊಕ್ಕನು +ಮನೆಯನ್+ಇತ್ತಲು
ದಿನಕರಂಗಾಯಿತ್ತು+ ಬೀಡ್+ಅಸ್ತಾಚಲ+ಅದ್ರಿಯಲಿ
ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ
(೨) ಹುಚ್ಚು ಹೆಚ್ಚಾಯಿತು ಎಂದು ಹೇಳಲು – ಮನದೊಳೊದವಿದ ಮರುಳುತನದುಬ್ಬಿನಲಿ ಹೊಕ್ಕನು ಮನೆಯನ್