ಪದ್ಯ ೩೮: ಕೀಚಕನು ದ್ರೌಪದಿಯನ್ನು ಏನೆಂದು ಬೇಡಿದನು?

ಉಳಿದ ತನ್ನರಸಿಯರ ನಿನ್ನಯ
ಬಳಿಯ ತೊತ್ತಿರ ಮಾಡುವೆನು ಕೇ
ಳೆಲೆಗೆ ತನ್ನೊಡಲಿಂಗೆಯೊಡೆತನ ನಿನ್ನದಾಗಿರಲಿ
ಲಲನೆ ನಿನ್ನೊಳು ನಟ್ಟಲೋಚನ
ತೊಲಗಲಾರದು ತನ್ನ ಕಾಯವ
ಬಳಲಿಸದೆ ಕೃಪೆ ಮಾಡಬೇಹುದೆನುತ್ತ ಕೈಮುಗಿದ (ವಿರಾಟ ಪರ್ವ, ೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಎಲೈ ಸೈರಂಧ್ರಿ, ಉಳಿದ ನನ್ನೆಲ್ಲಾ ರಾಣಿಯರೂ ನಿನಗೆ ದಾಸಿಗಳಾಗುತ್ತಾರೆ, ನನ್ನ ದೇಹಕ್ಕೆ ನೀನೇ ಒಡೆಯಳಾಗಿರುವೆ, ನಿನ್ನ ದೇಹದಲ್ಲಿ ನಟ್ಟ ನನ್ನ ಕಣ್ಣುಗಳು ಬೇರೆ ಕಡೆಗೆ ತಿರುಗುವುದೇ ಇಲ್ಲ. ನನ್ನ ದೇಹವನ್ನು ಬಳಲಿಸದೆ ಕೃಪೆತೋರು ಎಂದು ಕೀಚಕನು ದ್ರೌಪದಿಗೆ ಕೈಮುಗಿದು ಬೇಡಿದನು.

ಅರ್ಥ:
ಉಳಿದ: ಮಿಕ್ಕ; ಅರಸಿ: ರಾಣಿ; ಬಳಿ: ಹತ್ತಿರ; ತೊತ್ತು: ದಾಸಿ, ಸೇವಕಿ; ಕೇಳು: ಆಲಿಸು; ಒಡಲು: ದೇಹ; ಒಡೆತನ: ಯಜಮಾನತನ; ಲಲನೆ: ಹೆಣ್ಣು; ನಟ್ಟು: ಗಮನವಿಟ್ಟ; ಲೋಚನ: ಕಣ್ಣು; ತೊಲಗು: ಹೊರಹೋಗು; ಕಾಯ: ದೇಹ; ಬಳಲು: ಆಯಾಸಗೊಳಿಸು; ಕೃಪೆ: ದಯೆ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಉಳಿದ +ತನ್ನ್+ಅರಸಿಯರ +ನಿನ್ನಯ
ಬಳಿಯ +ತೊತ್ತಿರ +ಮಾಡುವೆನು +ಕೇಳ್
ಎಲೆಗೆ+ ತನ್ನೊಡಲಿಂಗೆ+ಒಡೆತನ+ ನಿನ್ನದಾಗಿರಲಿ
ಲಲನೆ +ನಿನ್ನೊಳು +ನಟ್ಟ+ಲೋಚನ
ತೊಲಗಲಾರದು +ತನ್ನ +ಕಾಯವ
ಬಳಲಿಸದೆ+ ಕೃಪೆ+ ಮಾಡಬೇಹುದ್+ಎನುತ್ತ +ಕೈಮುಗಿದ

ಅಚ್ಚರಿ:
(೧) ಆಸೆ ತೋರಿಸುವ ಪರಿ – ಉಳಿದ ತನ್ನರಸಿಯರ ನಿನ್ನಯ ಬಳಿಯ ತೊತ್ತಿರ ಮಾಡುವೆನು

ನಿಮ್ಮ ಟಿಪ್ಪಣಿ ಬರೆಯಿರಿ