ಪದ್ಯ ೩೩: ದ್ರೌಪದಿಯು ಮುಂದಾಗುವ ಅನುಹುತದ ಬಗ್ಗೆ ಹೇಗೆ ಹೇಳಿದಳು?

ಕುಲದೊಳೊಬ್ಬನು ಜನಿಸಿ ವಂಶವ
ನಳಿದನಕಟಕಟೆಂಬ ದುರ್ಯಶ
ವುಳಿವುದಲ್ಲದೆ ಲೇಸಗಾಣೆನು ಬರಿದೆ ಗಳಹದಿರು
ಕೊಲೆಗಡಿಕೆಯೋ ಪಾಪಿ ಹೆಂಗಸು
ಹಲಬರನು ಕೊಲಿಸಿದಳು ಸುಡಲೆಂ
ದಳಲುವರು ನಿನ್ನಖಿಳರಾಣಿಯರೆಂದಳಿಂದುಮುಖಿ (ವಿರಾಟ ಪರ್ವ, ೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ವೃಥಾ ಮಾತಾಡಬೇಡ, ಅಯ್ಯೋ ಇವನೊಬ್ಬನು ಹುಟ್ಟಿ ವಂಶವನ್ನೇ ನಾಶ ಮಾಡಿದನೆಂಬ ಅಪಕೀರ್ತಿ ನಿನಗೆ ಬರುವುದು. ಅದು ಶಾಶ್ವತವಾಗಿ ಉಳಿಯುವುದು, ನಿನಗೊಬ್ಬನಿಗೇ ಅಪಕೀರ್ತಿ ಬಾರದು, ಈ ಪಾಪಿ ಹೆಂಗಸು ಕೊಲೆಗಡುಕಿ, ಇವಳಿಂದ ಹಲವರು ಸತ್ತರು, ಇವಳನ್ನು ಸುಡಬೇಕು ಎಂದು ನಿನ್ನ ರಾಣಿಯರು ಅಳುತ್ತಾರೆ, ಇದು ಖಂಡಿತ, ಎಂದು ದ್ರೌಪದಿಯು ಕೀಚಕನಿಗೆ ಹೇಳಿದಳು.

ಅರ್ಥ:
ಕುಲ: ವಂಶ; ಜನಿಸು: ಹುಟ್ಟು; ವಂಶ: ಅನ್ವಯ; ಅಳಿ: ನಾಶ; ಅಕಟಕಟ: ಅಯ್ಯೋ; ದುರ್ಯಶ: ಅಪಜಯ, ಕುಖ್ಯಾತಿ; ಉಳಿ: ಇರು; ಲೇಸು: ಒಳಿತು; ಕಾಣು: ತೋರು; ಬರಿ: ಶೂನ್ಯ; ಗಳಹು: ಪ್ರಲಾಪಿಸು, ಹೇಳು; ಕೊಲೆ: ಸಾಯಿಸು; ಪಾಪಿ: ದುಷ್ಟ; ಹೆಂಗಸು: ಹೆಣ್ಣು; ಹಲಬರು: ಹಲವಾರು; ಸುಡು: ದಹಿಸು; ಅಳು: ರೋದಿಸು, ದುಃಖಿಸು; ಅಖಿಳ: ಎಲ್ಲಾ; ರಾಣಿ: ಅರಸಿ; ಇಂದುಮುಖಿ: ಚಂದ್ರನಂತಿರುವ ಮುಖ;

ಪದವಿಂಗಡಣೆ:
ಕುಲದೊಳ್+ಒಬ್ಬನು +ಜನಿಸಿ+ ವಂಶವನ್
ಅಳಿದನ್+ಅಕಟಕಟೆಂಬ+ ದುರ್ಯಶ
ಉಳಿವುದಲ್ಲದೆ +ಲೇಸ+ಕಾಣೆನು +ಬರಿದೆ+ ಗಳಹದಿರು
ಕೊಲೆಗಡಿಕೆಯೋ +ಪಾಪಿ +ಹೆಂಗಸು
ಹಲಬರನು +ಕೊಲಿಸಿದಳು +ಸುಡಲೆಂದ್
ಅಳಲುವರು +ನಿನ್ನ್+ಅಖಿಳ+ರಾಣಿಯರ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಕೀಚಕನ ಸ್ಥಿತಿಯನ್ನು ವರ್ಣಿಸಿದ ಪರಿ – ಕುಲದೊಳೊಬ್ಬನು ಜನಿಸಿ ವಂಶವನಳಿದನಕಟಕಟೆಂಬ ದುರ್ಯಶವುಳಿವುದಲ್ಲದೆ ಲೇಸಗಾಣೆನು

ನಿಮ್ಮ ಟಿಪ್ಪಣಿ ಬರೆಯಿರಿ