ಪದ್ಯ ೨೬: ದ್ರೌಪದಿಯ ಆಗಮನ ಯಾರ ಮನಸ್ಸನ್ನು ಗಾಸಿಯಾಗಿಸಿತು?

ಎಲೆಲೆ ಮದನನಗಜವು ತೊತ್ತಳ
ದುಳಿದುದೋ ಕಾಮುಕರನೆನೆ ಗಾ
ವಳಿಯೊಳಗೆ ಗಾರಾಯ್ತು ಗರುವಿಕೆ ವಿಟವಿದೂಷಕರ
ಅಳುಕಿದರು ಮನುಮಥನ ಗರುಡಿಯ
ಬಲುಮೆಗಾರರು ಬಂದಳಗ್ಗದ
ನಳಿನಮುಖಿ ಬಹುಜನದ ಮನಕಚ್ಚರಿಯನೊದವಿಸುತ (ವಿರಾಟ ಪರ್ವ, ೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ವಿಟ ವಿದೂಷಕರೇ ಮೊದಲಾದವರು, ಎಲೆಲೆ ಮನ್ಮಥನ ಮದದಾನೆಯು ಕಾಮುಕರನ್ನು ಕೆಡವಿ ತುಳಿಯುತ್ತಿದೆ ಎಂದರು. ಜನರ ಗುಂಪು ಗಾಸಿಯಾಯಿಗು, ಇವಳಾರಿರಬಹುದು ಎಂದು ಎಲ್ಲರೂ ಆಶ್ಚರ್ಯಪಡಲು, ದ್ರೌಪದಿಯು ಆಗಮಿಸಿದಳು.

ಅರ್ಥ:
ಮದನ: ಮನ್ಮಥ, ಕಾಮ; ಗಜ: ಆನೆ; ತೊತ್ತಳ: ನುಗ್ಗುನುರಿ, ರಭಸ; ತುಳಿ: ಮೆಟ್ಟುವಿಕೆ, ತುಳಿತ; ಕಾಮುಕ: ವಿಟ; ಗಾವಳಿ: ಗುಂಪು; ಗಾರು: ಒರಟು, ಹಿಂಸೆ; ಗರುವ: ಶ್ರೇಷ್ಠ; ವಿಟ: ಕಾಮುಕ, ವಿಷಯಾಸಕ್ತ; ವಿದೂಷಕ: ಹಾಸ್ಯಗಾರ; ಅಳುಕು: ಹೆದರು; ಮನುಮಥ: ಮದನ; ಗರುಡಿ: ವ್ಯಾಯಾಮಶಾಲೆ; ಬಲುಮೆ:ಬಲ, ಶಕ್ತಿ; ಬಂದಳು: ಆಗಮಿಸು; ಅಗ್ಗ: ಶ್ರೇಷ್ಠ; ನಳಿನಮುಖಿ: ಕಮಲದಂತಹ ಮುಖ; ಬಹು: ಬಹಳ; ಜನ: ಮನುಷ್ಯ; ಮನ: ಮನಸ್ಸು; ಅಚ್ಚರಿ: ಆಶ್ಚರ್ಯ; ಒದವಿಸು: ಕೊಡು, ನೀಡು;

ಪದವಿಂಗಡಣೆ:
ಎಲೆಲೆ +ಮದನನ+ಗಜವು +ತೊತ್ತಳದ್
ಉಳಿದುದೋ +ಕಾಮುಕರನ್+ಎನೆ +ಗಾ
ವಳಿಯೊಳಗೆ+ ಗಾರಾಯ್ತು +ಗರುವಿಕೆ+ ವಿಟ+ವಿದೂಷಕರ
ಅಳುಕಿದರು+ ಮನುಮಥನ+ ಗರುಡಿಯ
ಬಲುಮೆಗಾರರು+ ಬಂದಳ್+ಅಗ್ಗದ
ನಳಿನಮುಖಿ +ಬಹುಜನದ +ಮನಕಚ್ಚರಿಯನ್+ಒದವಿಸುತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮದನನಗಜವು ತೊತ್ತಳದುಳಿದುದೋ ಕಾಮುಕರನೆ
(೨) ಗ ಕಾರದ ತ್ರಿವಳಿ ಪದ – ಗಾವಳಿಯೊಳಗೆ ಗಾರಾಯ್ತು ಗರುವಿಕೆ

ನಿಮ್ಮ ಟಿಪ್ಪಣಿ ಬರೆಯಿರಿ