ವಲಲನೆಂಬಭಿದಾನದಲಿ ನೃಪ
ನಿಳಯವನು ಸಾರುವೆನು ತಾನೆಂ
ದುಲಿಯೆ ಮಾರುತಿ ನುಡಿದ ವರನಾಟ್ಯವಿದ ವೇಷವನು
ಫಲುಗುಣನು ಹಯ ಗೋ ನಿವಾಸ
ಸ್ಥಳ ವಿಳಾಸಿತರೆನಲು ಯಮಳರು
ಲಲನೆ ಬಿನ್ನಹ ಮಾಡಿದಳು ಸೈರಂಧ್ರಿ ವೇಷವನು (ವಿರಾಟ ಪರ್ವ, ೧ ಸಂಧಿ, ೭ ಪದ್ಯ)
ತಾತ್ಪರ್ಯ:
ವಲಲನೆಂಬ ಹೆಸರಿನಿಂದ ಅರಮನೆಯ ಬಾಣಸಿಗನಾಗಿರುತ್ತೇನೆ ಎಂದು ಭೀಮನು ಹೇಳಿದನು, ನಾನು ನಾಟ್ಯಾಚಾರ್ಯನಾಗಿರುತ್ತೇನೆ ಎಂದು ಅರ್ಜುನನು ಹೇಳಿದರೆ, ನಾವು ಹಯಶಾಲೆ ಗೋಶಾಲೆಗಳಲ್ಲಿರುವೆವೆಂದು ನಕುಲ ಸಹದೇವರು ಹೇಳಿದರು. ಸೈರಮ್ಧ್ರಿಯಾಗಿರುವೆನೆಂದು ದ್ರೌಪದಿಯು ಹೇಳಿದಳು.
ಅರ್ಥ:
ಅಭಿಧಾನ: ಹೆಸರು; ನೃಪ: ರಾಜ; ನಿಳಯ: ನಿವಾಸ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ಉಲಿ: ಧ್ವನಿ; ಮಾರುತಿ: ವಾಯು ಸುತ (ಭೀಮ); ನುಡಿ: ಮಾತಾಡು; ನಾಟ್ಯ: ನೃತ್ಯ; ವೇಷ: ತೋರಿಕೆಯ ರೂಪ, ಸೋಗು; ಹಯ: ಕುದುರೆ; ಗೋ: ಆಕಳು; ನಿವಾಸ: ಸ್ಥಾನ; ಸ್ಥಳ: ಜಾಗ; ವಿಳಾಸ: ಬೆಡಗು; ಯಮಳ: ಅಶ್ವಿನಿ ದೇವತೆಗಳು; ಲಲನೆ: ಹೆಣ್ಣು; ಬಿನ್ನಹ: ಮನವಿ; ವರ: ಶ್ರೇಷ್ಠ;
ಪದವಿಂಗಡಣೆ:
ವಲಲನೆಂಬ್+ಅಭಿದಾನದಲಿ +ನೃಪ
ನಿಳಯವನು +ಸಾರುವೆನು +ತಾನೆಂದ್
ಉಲಿಯೆ +ಮಾರುತಿ +ನುಡಿದ +ವರ+ನಾಟ್ಯವಿದ +ವೇಷವನು
ಫಲುಗುಣನು +ಹಯ +ಗೋ +ನಿವಾಸ
ಸ್ಥಳ +ವಿಳಾಸಿತರೆನಲು +ಯಮಳರು
ಲಲನೆ +ಬಿನ್ನಹ +ಮಾಡಿದಳು +ಸೈರಂಧ್ರಿ +ವೇಷವನು
ಅಚ್ಚರಿ:
(೧) ಮಾರುತಿ, ಫಲುಗುಣ, ಯಮಳರು, ಲಲನೆ – ಪಾಂಡವರನ್ನು ಕರೆದ ಪರಿ