ಸಾವು ಬೊಪ್ಪಂಗಾಗೆ ಮಾದ್ರೀ
ದೇವಿ ತನ್ನನು ಕರೆದು ಶಿಶುಗಳ
ನೋವು ಕೇಡಿದು ನಿನ್ನದಾರೈದಿವರ ಸಲಹುವುದು
ಭಾವ ಭೇದವನಣುವ ಬಗೆಯದೆ
ಕಾವುದೆಲೆ ಮಗನೆಂದು ಬೆಸಸಿದ
ಳಾವಪರಿಯಲಿ ಮರೆವೆನೈ ನಾ ಮಾದ್ರಿದೇವಿಯರ (ಅರಣ್ಯ ಪರ್ವ, ೨೬ ಸಂಧಿ, ೪೯ ಪದ್ಯ)
ತಾತ್ಪರ್ಯ:
ಧರ್ಮಜನು ಯಕ್ಷನ ಪ್ರಶ್ನೆಗೆ ಉತ್ತರಿಸುತ್ತಾ, ಯಕ್ಷನೇ ಕೇಳು, ಹಿಂದೆ ನಮ್ಮ ತಂದೆಯು ಮರಣಹೊಂದಿದನು. ಸಹಗಮನಕ್ಕೆ ಸಿದ್ಧಳಾದ ಮಾದ್ರೀದೇವಿಯು ನನ್ನನ್ನು ಕರೆದು ನಕುಲ ಸಹದೇವರನ್ನೊಪ್ಪಿಸಿ, ಧರ್ಮಜ ನನ್ನ ಮಕ್ಕಳ ನೋವು ಕೇಡುಗಳು ನಿನ್ನವು, ಅಣುಮಾತ್ರವೂ ಭೇದವನ್ನು ಬಗೆಯದೆ ಇವರನ್ನು ಕಾಪಾಡು ಎಂದು ಅಪ್ಪಣೆ ಕೊಟ್ಟಳು. ಅವಳನ್ನು ಹೇಗೆ ಮರೆಯಲಿ ಎಂದು ಕೇಳಿದನು.
ಅರ್ಥ:
ಸಾವು: ಮರಣ; ಬೊಪ್ಪ: ತಂದೆ; ಕರೆ: ಬರೆಮಾದು; ಶಿಶು: ಮಕ್ಕಳು; ನೋವು: ಬೇನೆ, ಶೂಲೆ; ಕೇಡು: ಆಪತ್ತು, ಕೆಡಕು; ಸಲಹು: ರಕ್ಷಿಸು; ಭೇದ: ವ್ಯತ್ಯಾಸ; ಅಣು: ಸ್ವಲ್ಪ, ಅತಿ ಚಿಕ್ಕ; ಬಗೆ: ರೀತಿ; ಕಾವುದು: ರಕ್ಷಿಸು; ಮಗ: ಪುತ್ರ; ಬೆಸ: ಅಪ್ಪಣೆ, ಆದೇಶ, ಕೇಳು; ಪರಿ: ರೀತಿ; ಮರೆ: ನೆನಪಿನಿಂದ ದೂರಮಾಡು;
ಪದವಿಂಗಡಣೆ:
ಸಾವು+ ಬೊಪ್ಪಂಗ್+ಆಗೆ +ಮಾದ್ರೀ
ದೇವಿ +ತನ್ನನು +ಕರೆದು +ಶಿಶುಗಳ
ನೋವು +ಕೇಡಿದು+ ನಿನ್ನದಾರೈದ್+ಇವರ +ಸಲಹುವುದು
ಭಾವ +ಭೇದವನ್+ಅಣುವ+ ಬಗೆಯದೆ
ಕಾವುದೆಲೆ +ಮಗನೆಂದು +ಬೆಸಸಿದಳ್
ಆವ+ಪರಿಯಲಿ +ಮರೆವೆನೈ+ ನಾ +ಮಾದ್ರಿ+ದೇವಿಯರ
ಅಚ್ಚರಿ:
(೧) ಮಾದ್ರಿಯ ಅಪ್ಪಣೆ – ಭಾವ ಭೇದವನಣುವ ಬಗೆಯದೆ ಕಾವುದೆಲೆ