ಎನಲು ಮೆಚ್ಚಿದನುಳಿದ ಭೀಮಾ
ರ್ಜುನರ ಹರಣವನಿತ್ತು ನಿಜ ನಂ
ದನನನಪ್ಪಿದನೊಲವಿನಲಿ ಯಮರಾಜನೈತಂದು
ತನುಜಸಾಕಿನ್ನಾಯ್ತು ನಿಮಗೀ
ವನನಿವಾಸವು ಬೀಳುಕೊಡು ಮುನಿ
ಜನವನಿನ್ನಜ್ಞಾತವಾಸಕೆ ಮನವ ಮಾಡೆಂದ (ಅರಣ್ಯ ಪರ್ವ, ೨೬ ಸಂಧಿ, ೫೦ ಪದ್ಯ)
ತಾತ್ಪರ್ಯ:
ಯಕ್ಷನು ಮೆಚ್ಚಿ ಭೀಮಾರ್ಜುನರಿಗೂ ಪ್ರಾಣವನ್ನು ಕೊಟ್ಟು, ಯಮನಾಗಿ ಬಂದು ತನ್ನ ಮಗನನ್ನು ಆಲಂಗಿಸಿಕೊಂಡು, ಮಗನೇ ನಿಮ್ಮ ವನವಾಸದ ಅವಧಿ ಮುಗಿಯಿತು. ನಿನ್ನೊಡನಿರುವ ಮುನಿಜನರನ್ನು ಕಳಿಸಿಕೊಟ್ಟು, ಅಜ್ಞಾತವಾಸಕ್ಕೆ ಅನುವಾಗು ಎಂದು ಹೇಳಿದನು.
ಅರ್ಥ:
ಮೆಚ್ಚು: ಹೊಗಳು; ಉಳಿದ: ಮಿಕ್ಕ; ಹರಣ: ಪ್ರಾಣ; ನಿಜ: ತನ್ನ; ನಂದನ: ಮಗ; ಅಪ್ಪು: ಆಲಂಗಿಸು; ಒಲವು: ಪ್ರೀತಿ; ಐತರು: ಬಂದು ಸೇರು; ತನುಜ: ಮಗ; ಸಾಕು: ನಿಲ್ಲಿಸು; ವನ: ಕಾಡು; ನಿವಾಸ: ಆಲಯ, ಮನೆ; ಬೀಳುಕೊಡು: ತೆರಳು; ಮುನಿ: ಋಷಿ; ಅಜ್ಞಾತ: ಯಾರಿಗೂ ಗೊತ್ತಾಗದ ಸ್ಥಿತಿ; ಮನ: ಮನಸ್ಸು;
ಪದವಿಂಗಡಣೆ:
ಎನಲು +ಮೆಚ್ಚಿದನ್+ಉಳಿದ +ಭೀಮಾ
ರ್ಜುನರ +ಹರಣವನಿತ್ತು +ನಿಜ+ ನಂ
ದನನನ್+ಅಪ್ಪಿದನ್+ಒಲವಿನಲಿ +ಯಮರಾಜನ್+ಐತಂದು
ತನುಜ+ಸಾಕಿನ್+ಆಯ್ತು +ನಿಮಗೀ
ವನ+ನಿವಾಸವು +ಬೀಳುಕೊಡು+ ಮುನಿ
ಜನವನ್+ಇನ್+ಅಜ್ಞಾತವಾಸಕೆ +ಮನವ +ಮಾಡೆಂದ
ಅಚ್ಚರಿ:
(೧) ಯಮನ ಪುತ್ರ ಪ್ರೇಮವನ್ನು ಹೇಳುವ ಪರಿ – ನಿಜ ನಂದನನನಪ್ಪಿದನೊಲವಿನಲಿ ಯಮರಾಜನೈತಂದು