ಪರಿಜನದೊಳವರವರ ಮುಖ್ಯರ
ಕರೆಸಿದನು ದುಶ್ಯಾಸನನು ನಿಮ
ಗರಸು ನೃಪನೀತಿಯಲಿ ಪಾಲಿಸುವನು ಮಹೀತಳವ
ಧರೆಯನಾತಂಗಿತ್ತೆವೆಮಗೀ
ಸುರನದೀ ತೀರದಲಿ ಕಾಶೀ
ಶ್ವರನ ಸನ್ನಿಧಿಯಿರವು ಘಟಿಸಿದುದೆಂದನಾ ಭೂಪ (ಅರಣ್ಯ ಪರ್ವ, ೨೨ ಸಂಧಿ, ೬೨ ಪದ್ಯ)
ತಾತ್ಪರ್ಯ:
ತನ್ನ ಬಳಿಗೆ ಬಂದ ಜನ ಸಮುದಾಯದ ಮುಖ್ಯಸ್ಥರನ್ನು ದುರ್ಯೋಧನನು ಕರೆಸಿಕೊಂಡು, ಇನ್ನು ಮುಂದೆ ದುಶ್ಯಾಸನನೇ ನಿಮ್ಮ ದೊರೆ, ನಾವು ರಾಜ್ಯವನ್ನು ಅವನಿಗೆ ಕೊಟ್ಟಿದ್ದೇವೆ, ಅವನು ರಾಜನೀತಿಗನುಸಾರವಾಗಿ ಭೂಮಿಯನ್ನು ಪಾಲಿಸುತ್ತಾನೆ, ನಾವು ಈ ಗಂಗಾತೀರದಲ್ಲಿ ಶಂಕರನ ಸನ್ನಿಧಿಯಲ್ಲಿರುತ್ತೇವೆ ಎಂದು ಹೇಳಿದನು.
ಅರ್ಥ:
ಪರಿಜನ: ಪರಿವಾರ; ಮುಖ್ಯ: ಶ್ರೇಷ್ಠ; ಕರೆಸು: ಬರೆಮಾಡು; ಅರಸು: ರಾಜ; ನೃಪ: ರಾಜ; ನೀತಿ: ಮಾರ್ಗ ದರ್ಶನ; ಪಾಲಿಸು: ರಕ್ಷಿಸು, ಕಾಪಾಡು; ಮಹೀತಳ: ಭೂಮಿ; ಧರೆ: ಭೂಮಿ; ಸುರನದಿ: ಗಂಗೆ; ತೀರ: ತಟ; ಕಾಶೀಶ್ವರ: ಶಂಕರ; ಸನ್ನಿಧಿ: ಹತ್ತಿರ; ಘಟಿಸು: ಏರ್ಪಡಿಸು; ಭೂಪ: ರಾಜ;
ಪದವಿಂಗಡಣೆ:
ಪರಿಜನದೊಳ್+ಅವರವರ+ ಮುಖ್ಯರ
ಕರೆಸಿದನು +ದುಶ್ಯಾಸನನು+ ನಿಮಗ್
ಅರಸು +ನೃಪನೀತಿಯಲಿ+ ಪಾಲಿಸುವನು +ಮಹೀತಳವ
ಧರೆಯನ್+ಆತಂಗ್+ ಇತ್ತೆವ್+ಎಮಗ್+ಈ
ಸುರನದೀ +ತೀರದಲಿ +ಕಾಶೀ
ಶ್ವರನ +ಸನ್ನಿಧಿಯಿರವು+ ಘಟಿಸಿದುದೆಂದನಾ +ಭೂಪ
ಅಚ್ಚರಿ:
(೧) ಭೂಪ, ಅರಸು, ನೃಪ; ಮಹೀತಳ, ಧರೆ – ಸಮನಾರ್ಥಕ ಪದಗಳು