ಉಸುರು ಬೀಯದ ಮುನ್ನ ರಾಜ್ಯವ
ನೊಸೆದು ಕೊಟ್ಟೆನು ಪಟ್ಟಬಂಧನ
ದೊಸಗೆಯಲಿ ಕೌತುಕವನೀ ಕಿವಿಯಾರೆ ಕೇಳುವೆನು
ಅಸುವನಳುಕದೆ ಬಿಡುವೆನೌ ಶಂ
ಕಿಸದೆ ದುಶ್ಯಾಸನಗೆ ಪಟ್ಟವ
ನೆಸಗಿ ನಡೆಯೌ ತಾಯೆ ಬಿಜಯಂಗೈಯಿ ನೀವೆಂದ (ಅರಣ್ಯ ಪರ್ವ, ೨೨ ಸಂಧಿ, ೩೦ ಪದ್ಯ)
ತಾತ್ಪರ್ಯ:
ನನ್ನ ಉಸುರು ನಿಲ್ಲುವ ಮೊದಲೇ ನಾನು ನನ್ನ ರಾಜ್ಯವನ್ನು ಪ್ರೀತಿಯಿಂದ ಕೊಟ್ಟಿದ್ದೇನೆ, ಪಟ್ಟಾಭಿಷೇಕದ ಸುದ್ದಿಯನ್ನು ಕಿವಿಯಾರೆ ಆಸಕ್ತಿಯಿಂದ ಕೇಳುತ್ತೇನೆ, ಅಳುಕಿಲ್ಲದೆ ದೇಹತ್ಯಾಗ ಮಾಡುತ್ತೇನೆ, ದುಶ್ಯಾಸನನಿಗೆ ಪಟ್ಟವನ್ನು ಕಟ್ಟಿರಿ, ನೀವು ದಯಮಾಡಿಸಿ ಎಂದು ದುರ್ಯೋಧನನು ಗಾಂಧಾರಿಗೆ ತಿಳಿಸಿದನು.
ಅರ್ಥ:
ಉಸುರು: ಜೀವ; ಬೀಯು: ಕೊನೆಗೊಳ್ಳು; ಮುನ್ನ: ಮೊದಲು; ಒಸೆ: ಪ್ರೀತಿಸು, ಮೆಚ್ಚು; ಕೊಡು: ನೀಡು; ಪಟ್ಟ: ಸ್ಥಾನ, ಪದವಿ; ಒಸಗೆ: ಶುಭ, ಮಂಗಳಕಾರ್ಯ; ಕೌತುಕ: ಕುತೂಹಲ; ಕಿವಿ: ಕರ್ಣ; ಕೇಳು: ಆಲಿಸು; ಅಸು: ಪ್ರಾಣ; ಅಳುಕು: ಹೆದರು; ಬಿಡು: ತೊರೆ; ಶಂಕ: ಅನುಮಾನ; ಎಸಗು: ಉಂಟುಮಾಡು, ಆಚರಿಸು; ನಡೆ: ತೆರಳು ತಾಯೆ: ಅಮ್ಮ, ಮಾತೆ; ಬಿಜಯಂಗೈ: ದಯಮಾಡಿಸು;
ಪದವಿಂಗಡಣೆ:
ಉಸುರು +ಬೀಯದ +ಮುನ್ನ +ರಾಜ್ಯವನ್
ಒಸೆದು +ಕೊಟ್ಟೆನು +ಪಟ್ಟ+ಬಂಧನದ್
ಒಸಗೆಯಲಿ +ಕೌತುಕವನ್+ಈ+ ಕಿವಿಯಾರೆ +ಕೇಳುವೆನು
ಅಸುವನ್+ಅಳುಕದೆ +ಬಿಡುವೆನೌ +ಶಂ
ಕಿಸದೆ+ ದುಶ್ಯಾಸನಗೆ+ ಪಟ್ಟವನ್
ಎಸಗಿ +ನಡೆಯೌ +ತಾಯೆ +ಬಿಜಯಂಗೈಯಿ +ನೀವೆಂದ
ಅಚ್ಚರಿ:
(೧) ದುರ್ಯೋಧನನ ನಿರ್ಧಾರ – ಶಂಕಿಸದೆ ದುಶ್ಯಾಸನಗೆ ಪಟ್ಟವನೆಸಗಿ ನಡೆಯೌ ತಾಯೆ