ಪದ್ಯ ೨೨: ಪಾಂಡವರೇಕೆ ಬರುವುದಿಲ್ಲವೆಂದು ಕೌರವನು ಹೇಳಿದನು?

ಕರೆಸಿದರೆ ದಿಟ ಬಾರರವರಾ
ಧರಣಿಯನು ಕೈಕೊಂಡು ನಿಲುವರು
ವರುಷ ಹದಿಮೂರಾದಡಲ್ಲದೆ ಮೆಟ್ಟರೀ ನೆಲವ
ಅರಿಗಳುಪಟಲದಿಂದ ತಪ್ಪಿಸಿ
ಮರಳಿಚಿದ ಜೀವೋಪಕಾರಕೆ
ಕುರುಕುಲಾಗ್ರಣಿ ಲೇಸುಮಾಡಿದನೆಂಬುದೀ ಲೋಕ (ಅರಣ್ಯ ಪರ್ವ, ೨೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭಾನುಮತಿಯ ಮಾತಿಗೆ ಉತ್ತರಿಸುತ್ತಾ, ನಾನು ಪಾಂಡವರನ್ನು ಕರೆಸಿದರೆ ಅವರು ಬರುವುದಿಲ್ಲ, ಆ ಕಾಡಿನಲ್ಲೇ ಇರುತ್ತಾರೆ, ಹದಿಮೂರು ವರ್ಷಗಳಾಗದೆ ಅವರು ನಗರವನ್ನು ಪ್ರವೇಶಿಸುವುದಿಲ್ಲ. ಶತ್ರುಗಳನ್ನು ಸೋಲಿಸಿ ಜೀವವುಳಿಸಿದ ಉಪಕಾರಕ್ಕಾಗಿ ಕೌರವನು ಅವರನ್ನು ಕರೆಸಿ ರಾಜ್ಯವನ್ನು ಕೊಟ್ಟನೆಂದು ಜಗವು ಆಡಿಕೊಳ್ಳುತ್ತದೆ ಎಂದನು.

ಅರ್ಥ:
ಕರೆಸು: ಬರೆಮಾಡು; ದಿಟ: ಸತ್ಯ; ಬಾ: ಆಗಮಿಸು; ಧರಣಿ: ಭೂಮಿ; ಕೈಕೊಂಡು: ತೆಗೆದುಕೋ; ನಿಲು: ನಿಲ್ಲು; ವರುಷ: ಸಂವತ್ಸರ; ಮೆಟ್ಟು: ನಿಲ್ಲು; ನೆಲ: ಭೂಮಿ; ಅರಿ: ವೈರಿ; ಉಪಟಳ: ಪರಾಭವ; ತಪ್ಪು: ದ್ರೋಹ; ಮರಳಿಸು: ಹಿಂದಿರುಗು; ಜೀವ: ಪ್ರಾಣ; ಉಪಕಾರ: ಸಹಾಯ; ಕುಲಾಗ್ರಣಿ: ವಂಶದ ಶ್ರೇಷ್ಠ ವ್ಯಕ್ತಿ; ಲೇಸು: ಒಳಿತು; ಲೋಕ: ಜಗತ್ತು;

ಪದವಿಂಗಡಣೆ:
ಕರೆಸಿದರೆ+ ದಿಟ+ ಬಾರರ್+ ಅವರ್
ಆ+ಧರಣಿಯನು +ಕೈಕೊಂಡು +ನಿಲುವರು
ವರುಷ +ಹದಿಮೂರಾದಡ್+ಅಲ್ಲದೆ +ಮೆಟ್ಟರೀ+ ನೆಲವ
ಅರಿಗಳ್+ಉಪಟಲದಿಂದ +ತಪ್ಪಿಸಿ
ಮರಳಿಚಿದ +ಜೀವ್+ಉಪಕಾರಕೆ
ಕುರುಕುಲಾಗ್ರಣಿ +ಲೇಸುಮಾಡಿದನ್+ಎಂಬುದೀ +ಲೋಕ

ಅಚ್ಚರಿ:
(೧) ಕೌರವನನ್ನು ಕುರುಕುಲಾಗ್ರಣಿ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ