ನುಡಿದವಧಿ ಹದಿಮೂರು ವರುಷದ
ಹೆಡತಲೆಯನೊದೆದೆದ್ದು ನಮ್ಮೀ
ಪೊಡವಿಯರ್ಧಕೆ ಬಲೆಯ ಬೀಸದೆ ಬಿಡುವರೇ ಬಳಿಕ
ನುಡಿಯ ಸಲಿಸದ ಮುನ್ನನೀ ಕೊ
ಟ್ಟೊಡೆ ಕೃತಘ್ನತೆ ತಪ್ಪುವುದು ಮಿಗೆ
ನುಡಿಯಲಮ್ಮೆನು ರಾಜಕಾರ್ಯವನೆಂದಳಿಂದುಮುಖಿ (ಅರಣ್ಯ ಪರ್ವ, ೨೨ ಸಂಧಿ, ೨೩ ಪದ್ಯ)
ತಾತ್ಪರ್ಯ:
ಕೌರವನ ಮಾತಿಗೆ ಉತ್ತರಿಸುತ್ತಾ, ಮಾತು ಕೊಟ್ಟಂತೆ ಪಾಂಡವರು ಹದಿಮೂರು ವರ್ಷಗಳನ್ನು ಕಳೆದು ನಮ್ಮ ರಾಜ್ಯದ ಅರ್ಧಕ್ಕೆ ಅವರು ಬಲೆ ಬೀಸದೆ ಬಿಡುವುದಿಲ್ಲ. ಅವಧಿ ಮುಗಿಯುವ ಮುನ್ನವೇ ಅವರನ್ನು ಕರೆಸಿ ರಾಜ್ಯವನ್ನು ಕೊಟ್ಟರೆ ಕೃತಘ್ನತೆ ತಪ್ಪುವುದಿಲ್ಲವೇ? ರಾಜ ಕಾರ್ಯದ ವಿಷಯದಲ್ಲಿ ಹೆಚ್ಚು ಮಾತನಾಡಲಾರೆ ಎಂದು ಭಾನುಮತಿ ನುಡಿದಳು.
ಅರ್ಥ:
ನುಡಿ: ಮಾತು; ಅವಧಿ: ಕಾಲ; ವರ್ಷ: ಸಂವತ್ಸರ; ಹೆಡತಲೆ: ತಲೆಯ ಹಿಂಭಾಗ; ಎದ್ದು: ಮೇಲೇಳು; ಪೊಡವಿ: ಪೃಥ್ವಿ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಬಲೆ: ಜಾಲ; ಬೀಸು: ಹರಡು; ಬಿಡು: ತೊರೆ; ಬಳಿಕ: ನಂತರ; ಸಲಿಸು: ದೊರಕಿಸಿ ಕೊಡು; ಮುನ್ನ: ಮೊದಲು; ಕೊಡು: ನೀಡು; ಕೃತಘ್ನತೆ: ಉಪಕಾರವನ್ನು ಮರೆಯುವವನು; ತಪ್ಪು: ಸುಳ್ಳಾಗು; ಮಿಗೆ: ಮತ್ತು; ರಾಜಕಾರ್ಯ: ರಾಜಕಾರಣ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ಭಾನುಮತಿ);
ಪದವಿಂಗಡಣೆ:
ನುಡಿದ್+ಅವಧಿ +ಹದಿಮೂರು +ವರುಷದ
ಹೆಡತಲೆಯನ್+ಒದೆದ್+ಎದ್ದು +ನಮ್ಮೀ
ಪೊಡವಿ+ಅರ್ಧಕೆ +ಬಲೆಯ +ಬೀಸದೆ +ಬಿಡುವರೇ +ಬಳಿಕ
ನುಡಿಯ +ಸಲಿಸದ +ಮುನ್ನ+ನೀ +ಕೊ
ಟ್ಟೊಡೆ +ಕೃತಘ್ನತೆ +ತಪ್ಪುವುದು +ಮಿಗೆ
ನುಡಿಯಲ್+ಎಮ್ಮೆನು +ರಾಜಕಾರ್ಯವನ್+ಎಂದಳ್+ಇಂದುಮುಖಿ
ಅಚ್ಚರಿ:
(೧) ಬ ಕಾರದ ಸಾಲು ಪದ – ಬಲೆಯ ಬೀಸದೆ ಬಿಡುವರೇ ಬಳಿಕ