ಅರಸಿಯರು ಸಖಿಯರು ಕುಮಾರಿಯ
ರರಸನನುಜನ ಹೆಂಡಿರನಿಬರು
ವೆರಸಿ ಬಂದಳು ಭಾನುಮತಿ ಯಮತನುಜನಾಶ್ರಮಕೆ
ಕರುಣಿ ರಕ್ಷಿಸು ಸೋಮವಂಶೋ
ದ್ಧರಣ ರಕ್ಷಿಸು ಸತ್ಯಧರ್ಮದ
ಸಿರಿಯೆ ರಕ್ಷಿಸೆನುತ್ತ ಧೊಪ್ಪನೆ ಕೆಡೆದಳಂಘ್ರಿಯಲಿ (ಅರಣ್ಯ ಪರ್ವ, ೨೧ ಸಂಧಿ, ೫ ಪದ್ಯ)
ತಾತ್ಪರ್ಯ:
ರಾಣಿಯರು, ಅವಳ ಸಖಿಯರು, ಕೌರವನ ತಮ್ಮಂದಿರ ಹೆಂಡತಿಯರು ಕೂಡಿ ಭಾನುಮತಿಯು ಧರ್ಮಜನ ಆಶ್ರಮಕ್ಕೆ ಬಂದಳು, ಎಲೈ ಕರುಣಾಶಾಲಿಯೇ, ಚಂದ್ರವಂಶೋದ್ಧಾರಕನೇ, ಸತ್ಯಧರ್ಮಗಳ ಐಶ್ವರನೇ ನಮ್ಮನ್ನು ರಕ್ಷಿಸು ಎಂದು ಬೇಡಿ ತಕ್ಷಣವೇ ಧರ್ಮಜನ ಪಾದಗಳಿಗೆ ಎರಗಿದಳು.
ಅರ್ಥ:
ಅರಸಿ: ರಾಣಿ, ಸಖಿ: ಸ್ನೀಹಿತೆ; ಕುಮಾರಿ: ಬಾಲೆ; ಅರಸ: ರಾಜ; ಅನುಜ; ತಮ್ಮ; ಹೆಂಡಿರು: ಹೆಂಡತಿ, ಭಾರ್ಯ; ಅನಿಬರು: ಅಷ್ಟುಜನ; ಬಂದು: ಆಗಮಿಸು; ತನುಜ: ಮಗ; ಆಶ್ರಮ: ಕುಟೀರ; ಕರುಣಿ: ದಯಾಮಯಿ; ರಕ್ಷಿಸು: ಕಾಪಾಡು; ಸೋಮ: ಚಂದ್ರ; ವಂಶ: ಕುಲ; ಉದ್ಧರಣ: ಮೇಲಕ್ಕೆ ಎತ್ತುವುದು; ಸತ್ಯ: ನಿಜ; ಧರ್ಮ: ಧಾರಣೆ ಮಾಡುವುದು; ಸಿರಿ: ಐಶ್ವರ್ಯ; ಧೊಪ್ಪನೆ: ಕೂಡಲೆ; ಕೆಡೆ: ಬೀಳು; ಅಂಘ್ರಿ: ಪಾದ;
ಪದವಿಂಗಡಣೆ:
ಅರಸಿಯರು +ಸಖಿಯರು +ಕುಮಾರಿಯರ್
ಅರಸನ್+ಅನುಜನ +ಹೆಂಡಿರ್+ಅನಿಬರು
ವೆರಸಿ+ ಬಂದಳು+ ಭಾನುಮತಿ+ ಯಮ+ತನುಜನ್+ಆಶ್ರಮಕೆ
ಕರುಣಿ +ರಕ್ಷಿಸು +ಸೋಮ+ವಂಶೋ
ದ್ಧರಣ+ ರಕ್ಷಿಸು+ ಸತ್ಯ+ಧರ್ಮದ
ಸಿರಿಯೆ +ರಕ್ಷಿಸೆನುತ್ತ+ ಧೊಪ್ಪನೆ +ಕೆಡೆದಳ್+ಅಂಘ್ರಿಯಲಿ
ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ಕರುಣಿ, ಸೋಮವಂಶೋದ್ಧರಣ, ಸತ್ಯಧರ್ಮದಸಿರಿಯೆ
(೨) ಅ ಕಾರದ ಪದಗಳು – ಅರಸಿ, ಅರಸ, ಅನಿಬರು, ಆಶ್ರಮ, ಅಂಘ್ರಿ