ಪದ್ಯ ೩೫: ಕರ್ಣನು ಯಾವ ಬಾಣವನ್ನು ಹೂಡಿದನು?

ಗರುವರೇ ನೀವೆಲವೊ ಸುರಪನ
ಪುರದ ನಟ್ಟವಿಗರು ಸುಯೋಧನ
ನರಮನೆಯನಟ್ಟವಿಗಳಿಗೆ ಪಾಡಹಿರಿ ತುಡುಕುವೊಡೆ
ಅರಸು ಪರಿಯಂತೇಕೆ ನಿಮಗೆನು
ತರಿಭಟರಿಗಾಗ್ನೇಯ ವಾರುಣ
ನಿರುತಿ ಮೊದಲಾದಸ್ತ್ರಚಯವನು ಕವಿಸಿದನು ಕರ್ಣ (ಅರಣ್ಯ ಪರ್ವ, ೨೦ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕರ್ಣನು ಗಂಧರ್ವರ ಸೈನ್ಯವನ್ನು ಎದುರಿಸುತ್ತಾ, ಎಲೈ ಶೂರರೇ, ನೀವು ಅಮರಾವತಿಯ ನಟುವರಲ್ಲವೇ, ನೀವು ದುರ್ಯೋಧನನ ಅರಮನೆಯ ನಾಟ್ಯ ಮಾಡುವವರೊಡನೆ ಯುದ್ಧ ಮಾಡಲು ಸಾಧ್ಯ, ನಿಮಗೆ ರಾಜನವರೆಗೆ ಮಾತೇಕೆ, ಎನ್ನುತ್ತಾ ಆಗ್ನೇಯ, ವಾರುಣ, ನಿರಋತಿ ಮೊದಲಾದ ಮಂತ್ರಾಸ್ತ್ರಗಳನ್ನು ಕವಿಸಿದನು.

ಅರ್ಥ:
ಗರುವ: ಬಲಶಾಲಿ, ಶೂರ; ಸುರಪ: ಇಂದ್ರ; ಪುರ: ಊರು; ನಟುವ: ನರ್ತನ ಮಾಡುವವನು; ಅರಮನೆ: ರಾಜರ ಆಲಯ; ತುಡುಕು: ಹೋರಾಡು, ಸೆಣಸು; ಅರಸು: ರಾಜ; ಪರಿ: ಚಲಿಸು, ನಡೆ; ಅರಿಭಟ: ಶತ್ರುಸೈನ್ಯ; ಅಸ್ತ್ರ: ಆಯುಧ, ಶಸ್ತ್ರ; ಚಯ: ಸಮೂಹ, ರಾಶಿ; ಕವಿಸು: ಆವರಿಸು;

ಪದವಿಂಗಡಣೆ:
ಗರುವರೇ +ನೀವ್+ಎಲವೊ +ಸುರಪನ
ಪುರದ +ನಟ್ಟವಿಗರು +ಸುಯೋಧನನ್
ಅರಮನೆಯನ್+ಅಟ್ಟವಿಗಳಿಗೆ+ ಪಾಡಹಿರಿ +ತುಡುಕುವೊಡೆ
ಅರಸು+ ಪರಿಯಂತೇಕೆ+ ನಿಮಗೆನುತ್
ಅರಿ+ಭಟರಿಗ್+ಆಗ್ನೇಯ +ವಾರುಣ
ನಿರುತಿ+ ಮೊದಲಾದ್+ಅಸ್ತ್ರಚಯವನು +ಕವಿಸಿದನು +ಕರ್ಣ

ಅಚ್ಚರಿ:
(೧) ಕರ್ಣನು ಬಿಟ್ಟ ಬಾಣ – ಆಗ್ನೇಯ, ವಾರುಣ, ನಿರುತಿ ಮೊದಲಾದಸ್ತ್ರಚಯವನು ಕವಿಸಿದನು ಕರ್ಣ

ನಿಮ್ಮ ಟಿಪ್ಪಣಿ ಬರೆಯಿರಿ