ಪದ್ಯ ೨೩: ಗಂಧರ್ವರು ಕರ್ಣನ ಜೊತೆ ಹೇಗೆ ಯುದ್ಧ ಮಾಡಿದರು?

ಕಡಿದು ಗಂಧರ್ವನ ಶರೌಘವ
ನಡಸಿ ನೆಟ್ಟವು ಕರ್ಣಶರ ಸೈ
ಹೆಡಹಿದವು ಕಿಂಪುರುಷ ಗುಹ್ಯಕ ಯಕ್ಷರಾಕ್ಷಸರ
ಹೊಡಕರಿಸಿ ಹೊದರೆದ್ದು ಬಲ ಸಂ
ಗಡಸಿ ತಲೆವರಿಗೆಯಲಿ ಕರ್ಣನ
ಬಿಡು ಸರಳ ಬೀದಿಯಲಿ ಬೆದರದೆ ನೂಕಿತಳವಿಯಲಿ (ಅರಣ್ಯ ಪರ್ವ, ೨೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಗಂಧರ್ವನ ಬಾಣಗಳನ್ನು ಕಡಿದ ಕರ್ಣನ ಬಾಣಗಳು ಗಂಧರ್ವನ ಪಡೆಯಲ್ಲಿದ್ದ ಕಿಂಪುರುಷ, ಗುಹ್ಯಕ, ರಾಕ್ಷಸರನ್ನು ಸಂಹರಿಸಿದವು. ಆದರೆ ಗಂಧರ್ವ ಸೈನ್ಯವು ಕರ್ಣನ ಬಾಣಗಳಿಗೆ ಹೆದರದೆ ತಲೆಗಳನ್ನೇ ಗುರಾಣಿಯಾಗಿ ಒಡ್ಡಿ ಯುದ್ಧ ಮಾಡಿದರು.

ಅರ್ಥ:
ಕಡಿ: ಸೀಳು; ಗಂಧರ್ವ: ಖಚರ, ದೇವತೆಗಳ ವರ್ಗ; ಶರ: ಬಾಣ; ಔಘ: ಗುಂಪು, ಸಮೂಹ; ಅಡಸು: ಬಿಗಿಯಾಗಿ ಒತ್ತು, ತುರುಕು; ನೆಟ್ಟು: ಹೂಳು, ನಿಲ್ಲಿಸು; ಕೆಡಹು: ಹಾಳುಮಾಡು; ಹೊಡಕರಿಸು: ಕಾಣಿಸು, ಬೇಗಬೆರೆಸು; ತಲೆ: ಶಿರ; ಹೊದರು: ತೊಡಕು, ತೊಂದರೆ; ಬಲ: ಶಕ್ತಿ, ಸೈನ್ಯ; ಸಂಗಡ: ಜೊತೆ; ಬಿಡು: ತೊರೆ; ಸರಳ: ಬಾಣ; ಬೀದಿ: ಮಾರ್ಗ; ಬೆದರು: ಹೆದರು, ಅಂಜಿಕೆ; ನೂಕು: ತಳ್ಳು; ತಳ: ಸಮತಟ್ಟಾದ ಪ್ರದೇಶ;

ಪದವಿಂಗಡಣೆ:
ಕಡಿದು +ಗಂಧರ್ವನ +ಶರೌಘವನ್
ಅಡಸಿ +ನೆಟ್ಟವು +ಕರ್ಣ+ಶರ+ ಸೈ
ಹೆಡಹಿದವು +ಕಿಂಪುರುಷ +ಗುಹ್ಯಕ +ಯಕ್ಷ+ರಾಕ್ಷಸರ
ಹೊಡಕರಿಸಿ+ ಹೊದರೆದ್ದು+ ಬಲ+ ಸಂ
ಗಡಸಿ+ ತಲೆವರಿಗೆಯಲಿ +ಕರ್ಣನ
ಬಿಡು+ ಸರಳ+ ಬೀದಿಯಲಿ +ಬೆದರದೆ +ನೂಕಿ+ತಳವಿಯಲಿ

ಅಚ್ಚರಿ:
(೧) ಗಂಧರ್ವರ ಸೈನ್ಯದಲ್ಲಿದ್ದ ಪಂಗಡಗಳು – ಕಿಂಪುರುಷ, ಗುಹ್ಯಕ, ಯಕ್ಷ, ರಾಕ್ಷಸ

ನಿಮ್ಮ ಟಿಪ್ಪಣಿ ಬರೆಯಿರಿ