ಪದ್ಯ ೬: ಕರ್ಣನು ಗಂಧರ್ವರ ಜೊತೆ ಹೇಗೆ ಯುದ್ಧ ಮಾಡಿದನು?

ಹೊಯ್ಯಲಾದುದು ಚಿತ್ರಸೇನನ
ಬಯ್ಯಲೇತಕೆ ಬೇರೆಗಾಯದ
ಮೈಯಬಿಸುಟಾಯುಧದ ಬೆನ್ನಲಿ ಬಿಟ್ಟಮಂಡೆಗಳ
ಸುಯ್ಯ ಬಹಳದ ಭಟರು ತೊದಳಿಸು
ತೊಯ್ಯನೆಂದರು ಜೀಯ ಕರ್ಣನ
ಕೈಯಲಮರರ ಜೀವವಿದೆ ಜಾರುವುದು ಹಿತ ನಿಮಗೆ (ಅರಣ್ಯ ಪರ್ವ, ೨೦ ಸಂಧಿ, ೬ ಪದ್ಯ)

ತಾತ್ಪರ್ಯ:
ಶತ್ರುಗಳು ನಮ್ಮನ್ನು ಗೆದ್ದರು. ಇದಕ್ಕೆ ನಮ್ಮನ್ನು ವನದ ಕಾವಲಿಗೆ ನೇಮಿಸಿದ ಚಿತ್ರಸೇನನನ್ನೇಕೆ ಬೈಯಬೇಕು ಎನ್ನುತ್ತಾ ಗಾಯಗೊಂಡ ಮೈ, ಬಿಸುಟ ಆಯುಧ ಬೆನ್ನ ಮೇಲೆ ಜೋಲುವ ತಲೆಗೂದಲು, ಮತ್ತೆ ಮತ್ತೆ ಬಿಡುವ ನಿಟ್ಟುಸಿರುಗಳಿಂದ ಗಂಧರ್ವರು ತೊದಲುತ್ತಾ ದೇವೇಂದ್ರನ ಬಳಿ ದೂರಿದರು. ಜೀಯಾ ಗಂಧರ್ವರ ಜೀವ ಕರ್ಣನ ಕೈಲಿದೆ. ನಿಮಿಷ ಮಾತ್ರದಲ್ಲಿ ಜಾರಿ ಹೋಗುತ್ತದೆ, ಇದು ನಿಮಗೆ ಹಿತವೇ ಎಂದು ಕೇಳಿದರು.

ಅರ್ಥ:
ಹೊಯ್ಯು: ಹೊಡೆ; ಬಯ್ಯು: ಜರೆ; ಬೇರೆ: ಅನ್ಯ; ಗಾಯ: ಪೆಟ್ಟು; ಮೈ: ತನು; ಬಿಸುಟು: ಹೊರಹಾಕು; ಆಯುಧ: ಶಸ್ತ್ರ; ಬೆನ್ನು: ಹಿಂಭಾಗ; ಮಂಡೆ: ತಲೆ; ಸುಯ್ಯು: ನಿಟ್ಟುಸಿರು; ಬಹಳ: ಹೆಚ್ಚು; ಭಟ: ಸೈನಿಕ; ತೊದಲು: ತಡವರಿಸುತ್ತ ಮಾತನಾಡುವಿಕೆ; ಜೀಯ: ಒಡೆಯ; ಕೈ: ಹಸ್ತ; ಅಮರ: ದೇವತೆ; ಜೀವ: ಉಸಿರು; ಜಾರು: ಕಳಚಿಕೊಳ್ಳು; ಹಿತ: ಒಳ್ಳೆಯದು;

ಪದವಿಂಗಡಣೆ:
ಹೊಯ್ಯಲಾದುದು+ ಚಿತ್ರಸೇನನ
ಬಯ್ಯಲೇತಕೆ +ಬೇರೆ+ಗಾಯದ
ಮೈಯ+ಬಿಸುಟ+ಆಯುಧದ +ಬೆನ್ನಲಿ +ಬಿಟ್ಟ+ಮಂಡೆಗಳ
ಸುಯ್ಯ +ಬಹಳದ +ಭಟರು +ತೊದಳಿಸುತ್
ಒಯ್ಯನೆಂದರು+ ಜೀಯ+ ಕರ್ಣನ
ಕೈಯಲ್+ಅಮರರ+ ಜೀವವಿದೆ +ಜಾರುವುದು +ಹಿತ +ನಿಮಗೆ

ನಿಮ್ಮ ಟಿಪ್ಪಣಿ ಬರೆಯಿರಿ