ಪದ್ಯ ೫: ಕೌರವರು ಮತ್ತು ಗಂಧರ್ವರ ಯುದ್ಧ ಹೇಗಿತ್ತು?

ಮತ್ತೆ ಮುರಿದುದು ದೇವಬಲ ಬೆಂ
ಬತ್ತಿ ತಿವಿದರು ಕೌರವನ ಭಟ
ರೆತ್ತಿ ಹಾಯ್ಕಿದರದಟ ಗಂಧರ್ವರ ಭಟ ವ್ರಜವ
ತೆತ್ತಿಸಿದ ಸರಳೇರಿ ಸುರಿಗರು
ಳೊತ್ತುಗೈಗಳ ತಾಳಿಗೆಯ ತಲೆ
ಹೊತ್ತು ರಕ್ತದ ರಹಿಯಲೋಡಿತು ಸೇನೆ ಸುರಪುರಕೆ (ಅರಣ್ಯ ಪರ್ವ, ೨೦ ಸಂಧಿ, ೫ ಪದ್ಯ)

ತಾತ್ಪರ್ಯ:
ಗಂಧರ್ವರ ಸೈನ್ಯ ಭಂಗಗೊಂಡಿತು. ಕೌರವ ಸೈನ್ಯದ ವೀರರು ಗಂಧರ್ವ ಸೈನ್ಯವನ್ನು ಕೆಳಬೀಳಿಸಿದರು. ಬಾಣಗಳು ನಟ್ಟು, ಕರುಳುಗಳು ಸುರಿಯುತ್ತಿರಲು, ಕತ್ತು ತಲೆಗಳನ್ನು ಮಾತ್ರ ಉಳಿಸಿಕೊಂಡು, ರಕ್ತಸಿಕ್ತವಾದ ದೇಹಗಲೊಡನೆ ಗಂಧರ್ವರು ಅಮರಾವತಿಗೆ ಓಡಿದರು.

ಅರ್ಥ:
ಮುರಿ: ಸೀಳು; ದೇವ: ಸುರರು; ಬಲ: ಸೈನ್ಯ; ಬೆಂಬತ್ತು: ಹಿಂದೆ ಬೀಳು; ತಿವಿ: ಚುಚ್ಚು; ಭಟ: ಸೈನ್ಯ; ಹಾಯ್ಕು: ಹೊಡೆ; ಅದಟ: ಶೂರ, ಪರಾಕ್ರಮಿ; ಗಂಧರ್ವ: ದೇವತೆಗಳ ಒಂದು ವರ್ಗ; ಭಟ: ಸೈನಿಕ; ವ್ರಜ: ಗುಂಪು; ತೆತ್ತಿಸು: ಜೋಡಿಸು, ಕೂಡಿಸು; ಸರಳ: ಬಾನ; ಏರು: ಮೇಲೇರು; ಸುರಿ: ಮೇಲಿನಿಂದ ಬೀಳು; ಕರುಳು: ಪಚನಾಂಗ; ಒತ್ತು: ರಾಶಿ; ಕೈ: ಹಸ್ತ; ತಲೆ: ಶಿರ; ರಕ್ತ: ನೆತ್ತರು; ರಹಿ: ರೀತಿ, ಪ್ರಕಾರ; ಓಡು: ಧಾವಿಸು; ಸೇನೆ: ಸೈನ್ಯ; ಸುರಪುರ: ಅಮರಾವತಿ;

ಪದವಿಂಗಡಣೆ:
ಮತ್ತೆ +ಮುರಿದುದು +ದೇವ+ಬಲ+ ಬೆಂ
ಬತ್ತಿ +ತಿವಿದರು +ಕೌರವನ +ಭಟರ್
ಎತ್ತಿ+ ಹಾಯ್ಕಿದರ್+ಅದಟ +ಗಂಧರ್ವರ +ಭಟ +ವ್ರಜವ
ತೆತ್ತಿಸಿದ+ ಸರಳೇರಿ+ ಸುರಿ+ಕರುಳ್
ಒತ್ತು+ಕೈಗಳ +ತಾಳಿಗೆಯ+ ತಲೆ
ಹೊತ್ತು +ರಕ್ತದ +ರಹಿಯಲ್+ಓಡಿತು +ಸೇನೆ +ಸುರಪುರಕೆ

ಅಚ್ಚರಿ:
(೧) ಹೊತ್ತು, ಒತ್ತು; ಎತ್ತಿ, ತೆತ್ತಿ – ಪ್ರಾಸ ಪದಗಳು
(೨) ಒಂದೇ ಅಕ್ಷರದ ಜೋಡಿ ಪದಗಳು – ರಕ್ತದ ರಹಿಯಲೋಡಿತು; ಸೇನೆ ಸುರಪುರಕೆ; ಸರಳೇರಿ ಸುರಿಗರುಳೊತ್ತುಗೈಗಳ

ನಿಮ್ಮ ಟಿಪ್ಪಣಿ ಬರೆಯಿರಿ