ಪದ್ಯ ೪: ಕೌರವರು ಗಂಧರ್ವರ ಜೊತೆ ಹೇಗೆ ಯುದ್ಧ ಮಾಡಿದರು?

ನೂಕಿದರು ಮುಂಗುಡಿಯವರು ಬನ
ದಾಕೆಯಲಿ ಹೊಯ್ದರು ವಿರೋಧಿ ದಿ
ವೌಕಸರನಿಕ್ಕಿದರು ಸಿಕ್ಕಿದರುರುವ ಸಬಳದಲಿ
ಆಕೆವಾಳರು ಕರ್ಣ ಶಕುನಿಗ
ಳೇಕೆ ನಿಲುವರು ಬಿರಿದು ಪಾಡಿನ
ನೇಕ ಭಟರೊಳಹೊಕ್ಕು ತಿವಿದರು ಬೆರಸಿ ಸುರಬಲವ (ಅರಣ್ಯ ಪರ್ವ, ೨೦ ಸಂಧಿ, ೪ ಪದ್ಯ)

ತಾತ್ಪರ್ಯ:
ಅಗ್ರಭಾಗದಲ್ಲಿದ್ದ ಯೋಧರು ಕಾಡಿನ ಎದುರಿನಲ್ಲಿದ್ದ ಗಂಧರ್ವರನ್ನು ಹೊಡೆದರು. ಶತ್ರುಗಳಾದ ದೇವತೆಗಳನ್ನು ಕೊಂದು ಅವರ ಈಟಿಗಳ ಹೊಡೆತವನ್ನು ತಿಂದರು. ವೀರರಾದ ಕರ್ಣ, ಶಕುನಿಗಳು ಸುಮ್ಮನಿರುವವರೇ? ಅವರೂ ಸಹ ಆಕ್ರಮಣ ಮಾಡಿದರು, ಅನೇಕ ಬಿರುದಾವಳಿಗಳನ್ನೊಳಗೊಂಡ ವೀರ ಸೈನಿಕರು ಶತ್ರು ಸೈನ್ಯದೊಳಕ್ಕೆ ಹೊಕ್ಕು ಗಂಧರ್ವ ಸೈನ್ಯವನ್ನು ತಿವಿದರು.

ಅರ್ಥ:
ನೂಕು: ತಳ್ಳು; ಮುಂಗುಡಿ: ಮುಂಭಾಗ; ಬನ: ಕಾದು; ಹೊಯ್ದು: ಹೊಡೆ; ವಿರೋಧಿ: ಶತ್ರು; ದಿವೌಕಸ: ದೇವತೆ; ಇಕ್ಕು: ಇರಿಸು, ಇಡು; ಸಿಕ್ಕ: ಎದುರು ಬಮ್ದ; ಉರು: ಶ್ರೇಷ್ಠ; ಸಬಳ: ಈಟಿ, ಭರ್ಜಿ; ಆಕೆವಾಳ: ವೀರ, ಪರಾಕ್ರಮಿ; ನಿಲು: ತಡೆ; ಬಿರಿ: ಬಿರುಕು, ಸೀಳು; ಪಾಡು: ಸ್ಥಿತಿ; ಅನೇಕ: ಬಹಳ; ಭಟ: ಸೈನಿಕ; ಹೊಕ್ಕು: ಸೇರು; ತಿವಿ: ಚುಚ್ಚು; ಬೆರಸು: ಮಿಶ್ರಮಾಡು, ಕೂಡಿಸು; ಸುರ: ದೇವತೆ; ಬಲ: ಸೈನ್ಯ;

ಪದವಿಂಗಡಣೆ:
ನೂಕಿದರು +ಮುಂಗುಡಿಯವರು+ ಬನ
ದಾಕೆಯಲಿ +ಹೊಯ್ದರು +ವಿರೋಧಿ +ದಿ
ವೌಕಸರನ್+ಇಕ್ಕಿದರು +ಸಿಕ್ಕಿದರ್+ಉರುವ +ಸಬಳದಲಿ
ಆಕೆವಾಳರು +ಕರ್ಣ +ಶಕುನಿಗಳ್
ಏಕೆ +ನಿಲುವರು +ಬಿರಿದು +ಪಾಡಿನ್
ಅನೇಕ+ ಭಟರ್+ಒಳಹೊಕ್ಕು +ತಿವಿದರು +ಬೆರಸಿ +ಸುರಬಲವ

ಅಚ್ಚರಿ:
(೧) ನೂಕಿದರು, ಇಕ್ಕಿದರು, ಹೊಯ್ದರು, ತಿವಿದರು – ಪದಗಳ ಬಳಕೆ
(೨) ದೇವತೆಗಳನ್ನು ದಿವೌಕಸರ ಎಂದು ಕರೆದಿರುವುದು
(೩) ಸಬಳ, ಸುರಬಲ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ