ಪದ್ಯ ೩: ಯುದ್ಧಕ್ಕೆ ಯಾರು ಸಿದ್ಧರಾದರು?

ನೇಮವಾಯಿತು ಸುಭಟರೊಳಗೆ ಸ
ನಾಮರೆದ್ದರು ಕರ್ಣ ಸೌಬಲ
ಭೂಮಿಪತಿಯನುಜಾತ ಬಾಹ್ಲಿಕ ಶಲ್ಯನಂದನರು
ಸೋಮದತ್ತನ ಮಗ ಕಳಿಂಗ ಸು
ಧಾಮ ಚಿತ್ರ ಮಹಾರಥಾದಿಮ
ಹಾಮಹಿಮರನುವಾಯ್ತು ಗಜಹಯರಥನಿಕಾಯದಲಿ (ಅರಣ್ಯ ಪರ್ವ, ೨೦ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವನು ಅಪ್ಪಣೆ ಕೊಟ್ಟೊಡನೆ ಕರ್ಣ, ಶಕುನಿ, ದುಶ್ಯಾಸನ, ಬಾಹ್ಲಿಕ ಶಲ್ಯನ ಮಗ, ಸೋಮದತ್ತನ ಮಗ ಕಳಿಂಗ ಸುಧಾಮ ಚಿತ್ರ ಮೊದಲಾದ ಮಹಾರಥರು ಯುದ್ಧಕ್ಕೆ ಸಿದ್ಧರಾದರು. ಅವರ ಚತುರಂಗ ಸೈನ್ಯವೂ ಹೊರಟಿತು.

ಅರ್ಥ:
ನೇಮ: ವ್ರತ, ನಿಯಮ; ಭಟ: ಸೈನ್ಯ; ಸನಾಮ: ಪ್ರಸಿದ್ಧ; ಸೌಬಲ: ಶಕುನಿ; ಭೂಮಿಪತಿ: ರಾಜ; ಅನುಜಾತ: ತಮ್ಮ; ನಂದನ: ಮಗ; ಮಹಾರಥಿ: ಶೂರ, ಪರಾಕ್ರಮಿ; ಮಹಾಮಹಿಮ: ಶ್ರೇಷ್ಠ; ಅನುವು: ಸೊಗಸು; ಗಜ: ಆನೆ; ಹಯ: ಕುದುರೆ; ರಥ: ಬಂಡಿ; ನಿಕಾಯ: ಗುಂಪು;

ಪದವಿಂಗಡಣೆ:
ನೇಮವಾಯಿತು+ ಸುಭಟರೊಳಗೆ +ಸ
ನಾಮರೆದ್ದರು +ಕರ್ಣ +ಸೌಬಲ
ಭೂಮಿಪತಿ+ಅನುಜಾತ +ಬಾಹ್ಲಿಕ +ಶಲ್ಯ+ನಂದನರು
ಸೋಮದತ್ತನ+ ಮಗ +ಕಳಿಂಗ +ಸು
ಧಾಮ +ಚಿತ್ರ +ಮಹಾರಥಾದಿ+ಮ
ಹಾಮಹಿಮರ್+ಅನುವಾಯ್ತು +ಗಜ+ಹಯ+ರಥ+ನಿಕಾಯದಲಿ

ಅಚ್ಚರಿ:
(೧) ಮಹಾರಥರ ಹೆಸರು – ಕರ್ಣ, ಸೌಬಲ, ದುಶ್ಯಾಸನ, ಬಾಹ್ಲಿಕ, ಶಲ್ಯನಂದನ, ಕಳಿಂಗ, ಸುಧಾಮ, ಚಿತ್ರ,
(೨) ದುಶ್ಯಾಸನನನ್ನು ಭೂಮಿಪತಿಯನುಜಾತ ಎಂದು ಕರೆದ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ