ಪದ್ಯ ೧: ದುರ್ಯೋಧನನು ಯಾವ ಸ್ಥಿತಿಯಲ್ಲಿದ್ದನು?

ಕೇಳು ಜನಮೇಜಯ ಧರಿತ್ರೀ
ಪಾಲ ವನಪಾಲಕರ ಜಗಳದೊ
ಳಾಳು ನೊಂದುದು ಧರೆಗೆ ಬಿದ್ದುದು ತೋಟಿ ತೋಹಿನಲಿ
ಆಲಿಗಳ ಕೀಳ್ನೋಟದೊಲಹಿನ
ಮೌಳಿಯುಬ್ಬೆಯ ಸುಯ್ಲುದುಗುಡದ
ಜಾಳಿಗೆಯ ಜಡಮನದಲಿದ್ದನು ಕೌರವರ ರಾಯ (ಅರಣ್ಯ ಪರ್ವ, ೨೦ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಕೌರವರ ಸೈನ್ಯ ಮತ್ತು ಗಂಧರ್ವರ ಸೈನ್ಯದೊಡನೆ ಯುದ್ಧವಾಗಿ ಕೌರವರ ಸೈನ್ಯದವರು ಬಹಳ ನೊಂದರು, ಧರೆಗೆ ಉರುಳಿ ಗತಪ್ರಾಣರಾಗಿ ಒರಗಿದರು. ಈ ಸುದ್ದಿಯು ಕೌರವನ ಕಿವಿಗೆ ಬೀಳಲು, ಆತನು ಕಣ್ಣನ್ನು ಕೆಳನೋಟದಲ್ಲಿರಿಸಿ, ದುಃಖ ಜಾಲಕ್ಕೋಳಗಾಗಿ ನಿಟ್ಟುಸಿರು ಬಿಟ್ಟು ಸ್ತಬ್ಧಮನದಿಂದ ಕುಳಿತಿದ್ದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ವನ: ಕಾಡು; ಪಾಲಕ: ಒಡೆಯ; ಜಗಳ: ಕಾದಾಟ; ಆಳು: ಭಟರು; ನೊಂದು: ಕೊರಗು, ಪೆಟ್ಟುತಿಂದು; ಧರೆ: ಭೂಮಿ; ಬಿದ್ದು: ಬೀಳು, ಕುಸಿ; ತೋಟಿ: ಕಲಹ, ಜಗಳ; ತೋಹು: ತೋಪು; ಆಲಿ: ಕಣ್ಣು; ಕೀಳ್ನೋಟ: ಕೆಳಕ್ಕೆ ನೋಡು; ಮೌಳಿ: ಶಿರ; ಉಬ್ಬೆ: ಉದ್ವೇಗ, ಸಂಕಟ; ಸುಯ್ಲು: ನಿಟ್ಟುಸಿರು; ದುಗುಡ: ದುಃಖ; ಜಾಳಿ: ಜಾಲ, ಬಲೆ; ಜಡ: ಅಚೇತನವಾದುದು; ಮನ: ಮನಸ್ಸು; ರಾಯ: ರಾಜ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ವನಪಾಲಕರ+ ಜಗಳದೊಳ್
ಆಳು +ನೊಂದುದು +ಧರೆಗೆ +ಬಿದ್ದುದು +ತೋಟಿ +ತೋಹಿನಲಿ
ಆಲಿಗಳ+ ಕೀಳ್ನೋಟದ್+ಒಲಹಿನ
ಮೌಳಿ+ಉಬ್ಬೆಯ +ಸುಯ್ಲು+ದುಗುಡದ
ಜಾಳಿಗೆಯ +ಜಡಮನದಲ್+ಇದ್ದನು +ಕೌರವರ+ ರಾಯ

ಅಚ್ಚರಿ:
(೧) ಕೌರವನ ಸ್ಥಿತಿಯನ್ನು ಹೇಳುವ ಪರಿ – ಆಲಿಗಳ ಕೀಳ್ನೋಟದೊಲಹಿನ
ಮೌಳಿಯುಬ್ಬೆಯ ಸುಯ್ಲುದುಗುಡದ ಜಾಳಿಗೆಯ ಜಡಮನದಲಿದ್ದನು ಕೌರವರ ರಾಯ

ನಿಮ್ಮ ಟಿಪ್ಪಣಿ ಬರೆಯಿರಿ