ಪದ್ಯ ೧೫: ಗಣಿಕೆಯರು ಯಾರ ಬಳಿ ಬಂದರು?

ಎನುತ ಕವಿದುದು ಮತ್ತೆ ಕಾಂತಾ
ಜನ ಸುಯೋಧನನರಮನೆಯ ಸೊಂ
ಪಿನ ಸಖೀ ನಿಕುರುಂಬ ತುಂಬಿತು ವರ ತಪೋವನವ
ಮನಸಿಜನ ದಳ ನೂಕಿತೇಳೇ
ಳೆನುತ ಚೆಲ್ಲಿತು ಮುನಿನಿಕರ ನೃಪ
ವನಿತೆಯಿದಿರಲಿ ಸುಳಿದವರಿವರದಿರು ಮಂದಿ ಸಂದಣಿಸಿ (ಅರಣ್ಯ ಪರ್ವ, ೧೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಹೀಗೆ ಆಶ್ರಮವಾಸಿಗಳೆದುರಿನಲ್ಲಿ ವಾದಿಸಿ, ದುರ್ಯೋಧನನ ಅರಮನೆಯ ರಾಣಿಯರ ಸಖಿಯರ ತಂಡವು ತಪೋವನವನ್ನು ತುಂಬಿತು, ಕಾಮನ ಸೈನ್ಯವು ನುತ್ತಿ ಬರುತ್ತಿದೆ ಏಳಿರಿ ಎಂದು ಮುನಿಗಳು ಓಡಿದರು. ಸಖಿಯರ ಗುಂಪು ದ್ರೌಪದಿಯ ಇದಿರಿನಲ್ಲಿ ಸುಳಿದಿತು.

ಅರ್ಥ:
ಕವಿ: ಆವರಿಸು; ಕಾಂತಾಜನ: ಹೆಣ್ಣು; ಸ್ತ್ರೀಯರ ಗುಂಪು; ಅರಮನೆ: ರಾಜರ ಆಲಯ; ಸೊಂಪು: ಸೊಗಸು, ಚೆಲುವು; ಸಖಿ: ಗೆಳತಿ, ಸ್ನೇಹಿತೆ; ನಿಕುರುಂಬ: ಗುಂಪು, ಸಮೂಹ; ತುಂಬು: ಪೂರ್ಣವಾಗು; ವರ: ಶ್ರೇಷ್ಠ; ತಪೋವನ: ತಪಸ್ಸು ಮಾಡುವ ಕಾಡು; ಮನಸಿಜ: ಮದನ, ಕಾಮ; ದಳ: ಸೈನ್ಯ; ನೂಕು: ತಳ್ಳು; ಏಳು: ಮೇಲೇಳು; ಚೆಲ್ಲು: ಹರಡು, ಚದರಿ ಹೋಗು; ಮುನಿ: ಋಷಿ; ನಿಕರ: ಗುಂಪು; ನೃಪ: ರಾಜ; ವನಿತೆ: ಹೆಣ್ಣು; ಸುಳಿ:ಕಾಣಿಸಿಕೊಳ್ಳು; ಮಂದಿ: ಜನ, ಜನಸಮೂಹ; ಸಂದಣಿ: ಗುಂಪು, ಸಮೂಹ; ಇವರದಿರು: ಇವರೆದುರು;

ಪದವಿಂಗಡಣೆ:
ಎನುತ +ಕವಿದುದು +ಮತ್ತೆ +ಕಾಂತಾ
ಜನ +ಸುಯೋಧನನ್+ಅರಮನೆಯ +ಸೊಂ
ಪಿನ+ ಸಖೀ +ನಿಕುರುಂಬ +ತುಂಬಿತು +ವರ+ ತಪೋವನವ
ಮನಸಿಜನ +ದಳ +ನೂಕಿತ್+ಏಳೇಳ್
ಎನುತ +ಚೆಲ್ಲಿತು +ಮುನಿನಿಕರ+ ನೃಪ
ವನಿತೆ+ಇದಿರಲಿ+ ಸುಳಿದವರ್+ಇವರದಿರು+ ಮಂದಿ +ಸಂದಣಿಸಿ

ಅಚ್ಚರಿ:
(೧) ಸಂದಣಿಸಿ, ನಿಕರ, ನಿಕುರುಂಬ – ಸಾಮ್ಯಾರ್ಥ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ