ಕೆದರಿದರು ಗಡ್ಡವನುಪಾಧ್ಯರು
ಬೆದರಿನಿಂದರಿದೇನು ನೀವ್ ಮಾ
ಡಿದ ವಿಟಾಳವ ಹೇಳುವೆವು ಕುಂತೀಕುಮಾರರಿಗೆ
ಇದು ಮಹಾಮುನಿ ಸೇವಿತಾಶ್ರಮ
ವಿದರ ಶಿಷ್ಟಾಚಾರವನು ಕೆಡಿ
ಸಿದವರೇ ಕ್ಷಯವಹರು ಶಿವಶಿವಯೆಂದರಾ ದ್ವಿಜರು (ಅರಣ್ಯ ಪರ್ವ, ೧೯ ಸಂಧಿ, ೧೦ ಪದ್ಯ)
ತಾತ್ಪರ್ಯ:
ಗಣಿಕೆಯರ ವರ್ತನೆಗಳನ್ನು ಕಂಡು, ಉಪಾಧ್ಯಾಯರು ತಮ್ಮ ಗಡ್ಡವನ್ನು ಕೆದರಿ, ಭಯಗೊಂಡು ನಿಂತು, ಇದೇನು, ನಿಮ್ಮ ದುಷ್ಕೃತ್ಯವನ್ನು ಕುಂತೀ ಕುಮಾರರಿಗೆ ಹೇಳುತ್ತೇವೆ. ಇದು ಮಹರ್ಷಿಗಳಿರುವ ಆಶ್ರಮ, ಇದರ ಶಿಷ್ಟಾಚಾರವನ್ನು ಕೆಡಿಸಿದವರೇ ನಾಶವಾಗುತ್ತಾರೆ, ಶಿವ ಶಿವಾ ಎಂದರು.
ಅರ್ಥ:
ಕೆದರು: ಹರಡು; ಗಡ್ಡ: ಗದ್ದದ ಮೇಲಿನ ಕೂದಲು, ದಾಡಿ; ಉಪಾಧ್ಯರು: ಆಚಾರ್ಯ; ಬೆದರು: ಹೆದರು; ವಿಟಾಳ: ಅಪವಿತ್ರತೆ, ಮಾಲಿನ್ಯ; ಹೇಳು: ತಿಳಿಸು; ಕುಮಾರ: ಮಕ್ಕಳು; ಮಹಾಮುನಿ: ಶ್ರೇಷ್ಠವಾದ ಋಷಿ; ಸೇವೆ: ಶುಶ್ರೂಷೆ, ಉಪಚಾರ; ಆಶ್ರಮ: ಕುಟೀರ; ಶಿಷ್ಟಾಚಾರ: ಒಳ್ಳೆಯ ನಡವಳಿಕೆ, ಸಂಪ್ರದಾಯ; ಕೆಡಿಸು: ಹಾಳುಮಾಡು; ಕ್ಷಯ: ನಾಶ, ಹಾಳಾಗುವಿಕೆ; ದ್ವಿಜ: ಬ್ರಾಹ್ಮಣ;
ಪದವಿಂಗಡಣೆ:
ಕೆದರಿದರು+ ಗಡ್ಡವನ್+ಉಪಾಧ್ಯರು
ಬೆದರಿ+ನಿಂದರ್+ಇದೇನು +ನೀವ್ +ಮಾ
ಡಿದ +ವಿಟಾಳವ +ಹೇಳುವೆವು +ಕುಂತೀ+ಕುಮಾರರಿಗೆ
ಇದು +ಮಹಾಮುನಿ +ಸೇವಿತ+ಆಶ್ರಮವ್
ಇದರ +ಶಿಷ್ಟಾಚಾರವನು+ ಕೆಡಿ
ಸಿದವರೇ +ಕ್ಷಯವಹರು+ ಶಿವಶಿವ+ಎಂದರಾ +ದ್ವಿಜರು
ಅಚ್ಚರಿ:
(೧) ತೊಂದರೆಗೆ ಒಳಗಾಗುವವರು ಎಂದು ಹೇಳುವ ಪರಿ – ಇದು ಮಹಾಮುನಿ ಸೇವಿತಾಶ್ರಮ
ವಿದರ ಶಿಷ್ಟಾಚಾರವನು ಕೆಡಿಸಿದವರೇ ಕ್ಷಯವಹರು ಶಿವಶಿವಯೆಂದರಾ ದ್ವಿಜರು