ಪದ್ಯ ೯: ವಟುಗಳೇಕೆ ಓಡಿದರು?

ರಾಯರೆಂಬುವರಿಲ್ಲಲಾ ಸ್ವಾ
ಧ್ಯಾಯ ಕೆಟ್ಟುದು ಮುಟ್ಟಿದರು ಪಾ
ಧ್ಯಾಯರನು ಶೂದ್ರೆಯರು ಸೆಳೆದರು ಮೌಂಜಿಮೇಖಲೆಯ
ಹಾಯಿದರು ಯಜ್ಞೋಪವೀತಕೆ
ಬಾಯಲೆಂಜಲಗಿಡಿಯ ಬಗೆದರ
ಲಾಯೆನುತ ಬಿಟ್ಟೋಡಿದರು ಸುಬ್ರಹ್ಮಚಾರಿಗಳು (ಅರಣ್ಯ ಪರ್ವ, ೧೯ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜರೆಂಬುವರು ಇಲ್ಲವಾದರು, ನಮ್ಮ ಸ್ವಾಧ್ಯಾಯ ಕೆಟ್ಟು ಹೋಯಿತು. ಶೂದ್ರಿಯರು ನಮ್ಮ ಉಪಾಧ್ಯಾಯರನ್ನು ಮುಟ್ಟಿದರು. ಉಡಿದಾರವನ್ನೆಳೆದರು. ಬಾಯಲ್ಲಿ ಎಂಜಲನ್ನು ಹಾಕಲು ಯತ್ನಿಸಿದರು ಎಂದು ಒರಲುತ್ತಾ ಬ್ರಹ್ಮಚಾರಿಗಳು ಓಡಿ ಹೋದರು.

ಅರ್ಥ:
ರಾಯ: ರಾಜ; ಸ್ವಾಧ್ಯಾಯ: ಸ್ವಂತ ಓದುವಿಕೆ; ಕೆಟ್ಟು: ಹಾಳು; ಮುಟ್ಟು: ತಗುಲು; ಉಪಾಧ್ಯಾಯ: ಗುರು; ಶೂದ್ರೆ: ಗಣಿಕೆ; ಸೆಳೆ: ಆಕರ್ಷಿಸು; ಮೌಂಜಿ: ಮುಂಜೆ ಹುಲ್ಲಿನಿಂದ ಮಾಡಿದ ಉಡಿದಾರ, ಕಟಿಸೂತ್ರ; ಮೇಖಲೆ: ಮಂಜೆಹುಲ್ಲಿನ ಉಡಿದಾರ, ನಡುಕಟ್ಟು; ಹಾಯಿ: ಮೇಲೆಬೀಳು, ಚಾಚು; ಯಜ್ಞೋಪವೀತ: ಜನಿವಾರ; ಎಂಜಲು: ಬಾಯಿಂದ ಹೊರಬರುವ ರಸ; ಬಗೆ:ಕ್ರಮ, ಉಪಾಯ; ಓಡು: ಧಾವಿಸು; ಬ್ರಹ್ಮಚಾರಿ: ವಟು;

ಪದವಿಂಗಡಣೆ:
ರಾಯರೆಂಬುವರ್+ಇಲ್ಲಲಾ +ಸ್ವಾ
ಧ್ಯಾಯ +ಕೆಟ್ಟುದು +ಮುಟ್ಟಿದರ್+ಉಪಾ
ಧ್ಯಾಯರನು +ಶೂದ್ರೆಯರು +ಸೆಳೆದರು +ಮೌಂಜಿ+ಮೇಖಲೆಯ
ಹಾಯಿದರು +ಯಜ್ಞೋಪವೀತಕೆ
ಬಾಯಲ್+ಎಂಜಲ+ಕಿಡಿಯ +ಬಗೆದರ
ಲಾ+ಎನುತ +ಬಿಟ್ಟೋಡಿದರು +ಸುಬ್ರಹ್ಮಚಾರಿಗಳು

ಅಚ್ಚರಿ:
(೧) ಮುತ್ತು ನೀಡಿದರು ಎಂದು ಹೇಳುವ ಪರಿ – ಬಾಯಲೆಂಜಲಗಿಡಿಯ ಬಗೆದರಲಾ

ನಿಮ್ಮ ಟಿಪ್ಪಣಿ ಬರೆಯಿರಿ