ಪದ್ಯ ೭: ಗಣಿಕೆಯರು ಯಾವ ಬಲೆಯನ್ನು ಹರಡಿದರು?

ಹೊಕ್ಕರಿವರಾಶ್ರಮದ ತುರುಗಿದ
ತಕ್ಕರಂತಃಕರಣ ತುರಗಕೆ
ದುಕ್ಕುಡಿಯನಿಕ್ಕಿದರು ತಿರುಹಿದರೆರಡು ವಾಘೆಯಲಿ
ಸಿಕ್ಕಿದವು ದಾಳಿಯಲಿ ಧೈರ್ಯದ
ದಕ್ಕಡರ ಮನ ಹರಹಿನಲಿ ಹಾ
ಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ (ಅರಣ್ಯ ಪರ್ವ, ೧೯ ಸಂಧಿ, ೭ ಪದ್ಯ)

ತಾತ್ಪರ್ಯ:
ಗಣಿಕೆಯರು ಋಷ್ಯಾಶ್ರಮಗಳನ್ನು ಹೊಕ್ಕು ಅಲ್ಲಿನ ಆಚಾರವಂತರ ಸಮೂಹದ ಮನಸ್ಸಿನ ಕುದುರೆಗೆ ಕಡಿವಾಣವನ್ನು ಹಾಕಿದರು, ಎರಡೂ ಕಡೆ ಲಗಾಮನ್ನೆಳೆದರು. ಆ ಋಷಿಗಳ ಬಲಶಾಲಿಯಾದ ಧೈರ್ಯಕ್ಕೆ ತಮ್ಮ ಕಣ್ನೋಟಗಳೆಂಬ ಬಲೆಗಳನ್ನು ವಿಸ್ತಾರವಾಗಿ ಹರಡಿದರು.

ಅರ್ಥ:
ಹೊಕ್ಕು: ಸೇರು; ಆಶ್ರಮ: ಕುಟೀರ; ತುರುಗು: ಹೆಚ್ಚಾಗು, ಎದುರಿಸು; ಅಂತಃಕರಣ: ಮನಸ್ಸು; ತುರಗ: ಕುದುರೆ; ದುಕ್ಕುಡಿ: ಕಡಿವಾಣ; ತಿರುಹು: ತಿರುಗಿಸು; ವಾಘೆ: ಲಗಾಮು; ಸಿಕ್ಕು: ಪಡೆ; ದಾಳಿ: ಲಗ್ಗೆ; ಧೈರ್ಯ: ಎದೆಗಾರಿಕೆ, ಕೆಚ್ಚು; ದಕ್ಕಡ: ಸಮರ್ಥ, ಬಲಶಾಲಿ; ಮನ: ಮನಸ್ಸು; ಹರಹು: ಹರಡು; ಹಾಯ್ಕು: ಇಡು, ಇರಿಸು; ಕಡೆಗಣ್ಣು: ಕುಡಿನೋಟ; ಬಲೆ: ಜಾಲ; ಮುನಿ: ಋಷಿ; ಮೃಗ: ಪ್ರಾಣಿ; ಆವಳಿ: ಗುಂಪು;

ಪದವಿಂಗಡಣೆ:
ಹೊಕ್ಕರ್+ಇವರ್+ಆಶ್ರಮದ +ತುರುಗಿದ
ತಕ್ಕರ್+ಅಂತಃಕರಣ +ತುರಗಕೆ
ದುಕ್ಕುಡಿಯನ್+ಇಕ್ಕಿದರು +ತಿರುಹಿದರ್+ಎರಡು +ವಾಘೆಯಲಿ
ಸಿಕ್ಕಿದವು +ದಾಳಿಯಲಿ +ಧೈರ್ಯದ
ದಕ್ಕಡರ +ಮನ +ಹರಹಿನಲಿ +ಹಾ
ಯಿಕ್ಕಿದರು +ಕಡೆಗಣ್ಣ+ ಬಲೆಗಳ+ ಮುನಿ +ಮೃಗಾವಳಿಗೆ

ಅಚ್ಚರಿ:
(೧) ಗಣಿಕೆಯರ ಕುಡಿನೋಟದ ವರ್ಣನೆ: ಹಾಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ

ನಿಮ್ಮ ಟಿಪ್ಪಣಿ ಬರೆಯಿರಿ